Friday 8 November 2013

ಕ್ಯಾನ್ಸರ್


ಇತ್ತೀಚೆಗೆ ಎಲ್ಲಾ ಬ್ಲೌಸುಗಳೂ ತುಂಬಾ ಬಿಗಿಯುತ್ತಿತ್ತು. ನಾನೇನೂ ದಪ್ಪ ಆಗಿರಲಿಲ್ಲ. ಮೊದಲಿದ್ದ ಹಾಗೇ ಇದ್ದೆ. ಆದರೆ ಬ್ಲೌಸ್ ಯಾಕೆ ಟೈಟ್ ಆಗುತ್ತಿದೆ ಅರ್ಥವಾಗಲಿಲ್ಲ. ಬ್ಲೌಸ್ ಕಳಚಿ ಕನ್ನಡಿ ಮುಂದೆ ನಿಂತೆ. ದಷ್ಟಪುಷ್ಟವಾದ ಸ್ತನಗಳು. ಬಲಗೈಯನ್ನು ಮೇಲಕ್ಕೆತ್ತಿ ಎಡಗೈಯಿಂದ ಬಲ ಸ್ತನವನ್ನೂ, ಎಡಗೈಯನ್ನು ಮೇಲಕ್ಕೆತ್ತಿ ಬಲಗೈಯಿಂದ ಎಡ ಸ್ತನವನ್ನೂ ಒತ್ತಿ ಒತ್ತಿ ನೋಡಲಾರಂಭಿಸಿದೆ. ಏನೂ ಗೊತ್ತಾಗಲಿಲ್ಲ.

ಒಂದು ದಿನ ಎಡಗೈ ಎತ್ತಲಾಗದಷ್ಟು ನೋವಾಗಲಾರಂಭಿಸಿತು. ಡಾಕ್ಟರಲ್ಲಿ ಹೋದಾಗ ಸ್ತನ ಕ್ಯಾನ್ಸರ್ ಇರುವುದು ಗೊತ್ತಾಯಿತು.  3-4 ಡಾಕ್ಟರನ್ನು ಕನ್ಸಲ್ಟ್ ಮಾಡಿದೆವು. ಎಲ್ಲಾ ಕಡೆ ಒಂದೇ ರಿಸಲ್ಟ್. ಕೊನೆಗೆ ಬೆಂಗಳೂರು ಅನ್ಕಾಲಜಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆದೆ. ಮುಲಾಜಿಲ್ಲದೆ ಎಡಸ್ತನವನ್ನು ಕತ್ತರಿಸಿ ಹಾಕಿದರು. ಅಂದು ನಾನು ಅನುಭವಿಸಿದ ನೋವು, ಸಂಕಟ ಯಾರಿಗೂ ಬೇಡ. ಆಮೇಲೆ ತಿಂಗಳಿಗೊಂದರಂತೆ ಒಟ್ಟು 6 ಕಿಮೋ ತೆಗೆದುಕೊಳ್ಳಬೇಕು ಅಂದ್ರು. ಅದರಂತೆ ತಿಂಗಳಿಗೊಮ್ಮೆ ಕಿಮೋ ತಗೊಳ್ಳಲು ಆರಂಭಿಸಿದೆ.  3-4 ಕಿಮೋ ತಗೊಳ್ಳೊವರೆಗೂ ಸರಿಯಾಗೇ ಇದ್ದೆ. ಆಮೇಲೆ ಕಿಮೋ ತಗೊಳ್ಳಲು ಆಸ್ಪತ್ರೆಗೆ ಹೋಗ್ಬೇಕು ಅಂದ್ರೆ ಚಳಿ ಸುರುವಾಗುತ್ತಿತ್ತು. ಕಿಮೋ ತಗೊಂಡ ಒಂದು ವಾರ ತುಂಬಾ ಹಿಂಸೆ ಆಗುತ್ತಿತ್ತು. ಏನು ತಗೊಂಡರೂ ವಾಂತಿ ಆಗುತ್ತಿತ್ತು. ಒಂದು ದಿನ ತಲೆಗೆ ಸ್ನಾನ ಮಾಡಿ ಬಂದು ತಲೆ ಒರೆಸಿದ್ರೆ ಕೂದಲೆಲ್ಲಾ ಟವೆಲ್ ನಲ್ಲಿ ಬಂದಿತ್ತು. ನಾನು ಬೋಡಿ ಆಗಿದ್ದೆ. 6 ರಿಂದ 8 ಕಿಮೋ ಆಯಿತು. ಇನ್ನೂ 4 ಕಿಮೋ ತಗೋಬೇಕು ಅಂದ್ರು. ಔಷಧಿಯ ಪರಿಣಾಮ ಮೈಯೆಲ್ಲಾ ಕಪ್ಪಾಗಿತ್ತು ಜೊತೆಗೆ ಗುಳ್ಳೆಗಳು. ತಲೆ ಹುಬ್ಬು ಕಣ್ಣು ರೆಪ್ಪೆ ಎಲ್ಲೂ ಕೂದಲಿನ ಸುಳಿವಿಲ್ಲ. ಕನ್ನಡಿ ಮುಂದೆ ನಿಂತುಕೊಳ್ಳಲೂ ಭಯಪಡುವಂತಾಯಿತು. ಒಂದೊಮ್ಮೆ ಕಾಲೇಜಿಗೆ ಹೋಗುತ್ತಿರಬೇಕಾದರೆ ಹುಡುಗರ ಹಿಂಡೇ ಹಿಂದಿನಿಂದ ಬರುತ್ತಿತ್ತು. ಸ್ನೇಹಿತೆಯರೆಲ್ಲ ಏನು ಸೆಕ್ಸಿ ಆಗಿದ್ದೀಯ ಕಣೆ ಅಂತ ರೇಗಿಸುತ್ತಿದ್ದರು. ನನಗಾಗ ಹೆಮ್ಮೆ ಅನಿಸುತ್ತಿತ್ತು. ಅವರುಗಳು ಒಳಗೊಳಗೆ ಕುರುಬುತ್ತಿದ್ದರು. ಅದೆಲ್ಲಾ ಒಮ್ಮೆ ಕಣ್ಣ ಮುಂದೆ ಹಾದು ಹೋಯಿತು.

ಅಪ್ಪನನ್ನು ಕಳಕೊಂಡ ಅಮ್ಮನಿಗೆ ಇಳಿವಯಸ್ಸಿನಲ್ಲಿ ನಾನು ಸೇವೆ ಮಾಡಬೇಕಾಗಿದ್ದ ಸಮಯ ಅವಳಿಂದ ಸೇವೆ ಮಾಡಿಸಿಕೊಳ್ಳಬೇಕಾಗಿ ಬಂದಿದ್ದು ನನ್ನ ದುರಾದೃಷ್ಟ. ನನ್ನನ್ನು ನೋಡಿಕೊಳ್ಳುವುದರ ಜೊತೆಗೆ ವಿಷಯ ತಿಳಿದು ನನ್ನನ್ನು ನೋಡಲೆಂದು ಊರಿನಿಂದ ಬರುತ್ತಿದ್ದ ಸಂಬಂಧಿಕರನ್ನೂ ಸುಧಾರಿಸಬೇಕಿತ್ತು. ನನಗೆ ಅಳಲು ಕಣ್ಣಲ್ಲಿ ನೀರು ಕೂಡಾ ಬತ್ತಿ ಹೋಗಿತ್ತು. ಎಲ್ಲಿತ್ತು ಈ ಹಾಳು ಕಾಯಿಲೆ. ಎಷ್ಟು ಜನರಿಗೆ ನನ್ನಿಂದ ತೊಂದರೆ. ಅದರ ಬದಲು ಹಾರ್ಟ್ ಅಟ್ಯಾಕ್ ಆದ್ರು ಆಗಬಾರದಿತ್ತಾ ಅನ್ನಿಸುತ್ತಿತ್ತು.

ಆ ಸಮಯದಲ್ಲಿ ಬಂದವಳು ರಾಜೇಶ್ವರಿ. ಸುಮಾರು 12 ವರ್ಷಗಳ ಹಿಂದೆ ಅವಳೂ ಕೂಡಾ ಇದೇ ಕಾಯಿಲೆಯಿಂದ ನರಳುತ್ತಿದ್ದವಳು. ಆದರೆ ಅವಳಿಗೆ ಸಾಂತ್ವನ ಹೇಳುವವರಾಗಲಿ ಸೇವೆ ಮಾಡುವವರಾಗಲಿ ಯಾರೂ ಇರಲಿಲ್ಲ. ಅವಳಿಗೆ ಇದ್ದುದು ಒಂದೇ ಅದು ವಿಲ್ ಪವರ್. ಕಾಯಿಲೆಯಿಂದ ಗುಣಮುಖಳಾಗುತ್ತಿದ್ದಂತೆ ಅವಳು ನಿರ್ಧರಿಸಿದ್ದಳು. ಈ ಕಾಯಿಲೆಯಿಂದ ನರಳುವ ಯಾರಿಗಾದರೂ ತನ್ನಿಂದಾದ ಸಹಾಯ ಮಾಡಬೇಕು ಎಂದು. ಯಾರಿಗಾದರೂ ಈ ಕಾಯಿಲೆ ಇರುವ ವಿಷಯ ತಿಳಿದ ತಕ್ಷಣ ಎಷ್ಟೇ ದೂರವಾದ್ರೂ ಸರಿ ಅವರಲ್ಲಿಗೆ ಹೋಗಿ ಸಾಂತ್ವನ ಹೇಳುತ್ತಿದ್ದಳು. ತನ್ನಿಂದಾದ ಸಹಾಯ ಮಾಡುತ್ತಿದ್ದಳು. ವಿಷಯ ತಿಳಿದು ನನ್ನಲ್ಲಿಗೂ ಹುಡುಕಿಕೊಂಡು ಬಂದು ತನ್ನ ಅನುಭವವನ್ನು ಹೇಳಿದಾಗ, ಎಲ್ಲಾ ಮುಗಿದು ಹೋಯಿತು ಎಂದು ಆತ್ಮವಿಶ್ವಾಸ ಕಳೆದುಕೊಂಡಂತಿದ್ದ ನನ್ನಲ್ಲೂ ಕೊಂಚ ಬದಲಾವಣೆ ಆಗಲಾರಂಭಿಸಿತು. ನನ್ನಲ್ಲಿನ ಬದಲಾವಣೆ ಕಂಡು ಅಮ್ಮನಿಗೂ ಕೊಂಚ ಹಾಯೆನಿಸಿತ್ತು.

ಇಂದು ಸಂಪೂರ್ಣವಾಗಿ ಹುಷಾರಾಗಿದ್ದೇನೆ. ಇಂದು ಕೂಡಾ ಬ್ಲೌಸ್ ಕಳಚಿ ಕನ್ನಡಿ ಮುಂದೆ ನಿಂತಿದ್ದೇನೆ. 8 ವರ್ಷದ ಮಗಳು ನೋಡಿದವಳೇ ಬೆಚ್ಚಿ ಯಾಕಮ್ಮಾ ಹೀಗಿದೆ ನಿನ್ನ ಮೊಮ್ಮ ಏನಾಯ್ತಮ್ಮ ಎಂದು ಅಳಲಾರಂಭಿಸಿದಳು. ನಾನು ಅವಳನ್ನು ತಬ್ಬಿಕೊಂಡವಳೇ ಅಳಬೇಡ ಕಂದಾ, ಅದರ ಮೇಲೆ ಗಾಯ ಆಗಿತ್ತು ಅದಕ್ಕೆ ಅದನ್ನ ಕಟ್ ಮಾಡಿದ್ದಾರೆ. ಸ್ವಲ್ಪ ದಿನ ಆದ ಮೇಲೆ ಬರುತ್ತೆ ಅಂತ ಸಮಾಧಾನಪಡಿಸಿದೆ. ಅಂದಿನಿಂದ ನಾನು ಕೂಡಾ ರಾಜೇಶ್ವರಿಯ ಹಾದಿ ಹಿಡಿದೆ. ಯಾರಿಗಾದರೂ ಈ ಕಾಯಿಲೆ ಇರುವ ವಿಷಯ ತಿಳಿದಲ್ಲಿ ಹೋಗಿ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಹಾಗೂ ಈ ಕಾಯಿಲೆ ಬಂದ್ರೆ ಸತ್ತೇ ಹೋಗುತ್ತಾರೆ ಎಂಬ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ಪ್ರಾರಂಭಿಸಿದೆ. 40 ವರ್ಷ ಮೇಲ್ಪಟ್ಟವರು ವರ್ಷಕ್ಕೊಮ್ಮೆ ಮಮೋಗ್ರಫಿ ಮಾಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಿದೆ.  ಈಗ ನನ್ನಲ್ಲಿ ನನಗೆ ತೃಪ್ತಿ ಇದೆ. ಆತ್ಮವಿಶ್ವಾಸ ಒಂದಿದ್ದಲ್ಲಿ ಜೀವನದಲ್ಲಿ ಏನನ್ನಾದರೂ ಗೆಲ್ಲಬಹುದು. ಆದರೂ ಕನ್ನಡಿ ಮುಂದೆ ನಿಂತಾಗಲೆಲ್ಲಾ ದೇವರಲ್ಲಿ ಬೇಡಿಕೊಳ್ಳುತ್ತೇನೆ ಈ ಕಾಯಿಲೆ ಯಾರಿಗೂ ಬಾರದಿರಲಿ.

*****

Thursday 7 November 2013

ಸಂಬಂಧ


ಅಂದು ನನ್ನ ಮಗುವಿನ ನಾಮಕರಣ. 9 ತಿಂಗಳಿಗೆ ನಾಮಕರಣ ಮಾಡಲು ನಿಶ್ಚಯಿಸಿ ನೆಂಟರಿಷ್ಟರನ್ನೆಲ್ಲಾ ಆಹ್ವಾನಿಸಿದ್ದೆವು. ಎಲ್ಲೆಲ್ಲೂ ಸಂತಸ ಸಂಭ್ರಮ ತುಳುಕಾಡುತ್ತಿತ್ತು. ಎಲ್ಲರೂ ಮಗುವನ್ನು ಹೊಗಳುವವರೇ. ಮದುವೆಯಾಗಿ 15 ವರ್ಷಗಳ ನಂತರ ಹುಟ್ಟಿದ ಗಂಡು ಮಗು. ಅಮ್ಮನಿಗಂತೂ ಸಂತೋಷದಿಂದ ಕಾಲು ನೆಲದ ಮೇಲೇ ನಿಲ್ಲುತ್ತಿರಲಿಲ್ಲ. ‘’ನನ್ನ ಮಗನೂ ಚಿಕ್ಕೋನಿರೋವಾಗ ಹೀಗೇ ಇದ್ದ. ಕಣ್ಣು ಮೂಗು ಎಲ್ಲಾ ನನ್ನ ಮಗನ ತರಾನೇ ಇದೆ’’ ಎಂದು ಎಲ್ಲರಿಗೂ ಮಗುವನ್ನು ತೋರಿಸಿದ್ದೇ ತೋರಿಸಿದ್ದು. ಅವರ ಸ್ನೇಹಿತೆಯರು ಕೂಡಾ ‘’ಹೌದು ಕಣ್ರೀ ಡಿಟ್ಟೋ ನಿಮ್ಮ ಮಗನ ತರಾನೇ ಇದ್ದಾನೆ’’ ಅಂತಿದ್ರು.

 ಮದುವೆಯಾಗಿ ಎಂಟು ವರ್ಷಗಳಾದರೂ ಇನ್ನೂ ಮಕ್ಕಳಾಗದಿದ್ದ ನಮ್ಮನ್ನು ಕೆಲವರು ಹಿಂದಿನಿಂದ ಆಡಿಕೊಳ್ಳುತ್ತಿದ್ದರು. ಬೇಡಾ ಅಂದ್ರೂ ಅದು ನಮ್ಮ ಕಿವಿಗೆ ಬೀಳುತ್ತಿತ್ತು. ಹೋಮಿಯೋಪತಿಗೆ ಹೋದಲ್ಲಿ ಮಕ್ಕಳಾಗುವ ಸಾಧ್ಯತೆ ಇದೆ ಎಂದು ಒಬ್ಬರು ಹೇಳಿದರು. ಅದನ್ನು ಪ್ರಯತ್ನಿಸಿದೆವು. ನಾಗದೋಷವಿದ್ದಲ್ಲಿ ನಾಗ ಪ್ರತಿಷ್ಟೆ ಮಾಡಿಸಿದರೆ ಮಕ್ಕಳಾಗುತ್ತದೆ ಎಂದು ಇನ್ನೊಬ್ಬರು ಹೇಳಿದರು. ಅದನ್ನೂ ಮಾಡಿದೆವು. ಕೊನೆಗೆ ಯಾರು ಏನು ಹೇಳುತ್ತಾರೆ ಎಲ್ಲವನ್ನೂ ಮಾಡಿದೆವು. ಕೊನೆಗೆ ಒಬ್ಬ ಫೇಮಸ್ ಡಾಕ್ಟರಲ್ಲಿ ಇಬ್ಬರೂ ಮೆಡಿಕಲ್ ಚೆಕ್ ಅಪ್ ಮಾಡಿಸಿದಾಗ ನನ್ನಲ್ಲೇ ದೋಷವಿರುವ ಕಾರಣ ಮಕ್ಕಳಾಗುವ ಸಾಧ್ಯತೆ ತುಂಬಾ ಕಡಿಮೆ ಎಂದು ತಿಳಿಯಿತು. ಇಬ್ಬರೂ ದಿಕ್ಕು ತೋಚದೆ ಪೆಚ್ಚಾಗಿ ಮನೆಗೆ ಹಿಂತಿರುಗಿದೆವು. ಅಮ್ಮ ನೊಂದುಕೊಳ್ಳುತ್ತಾರೆ ಅಂತ ವಿಷಯ ಮುಚ್ಚಿಟ್ಟೆವು. ಆಮೇಲೆ ನಾವಿಬ್ಬರು ಅನುಭವಿಸಿದ ನೋವು ಹೇಳಲಸಾಧ್ಯ.

ಅಂದು ನನ್ನವಳ ವರ್ತನೆ ಸ್ವಲ್ಪ ವಿಚಿತ್ರವಾಗಿತ್ತು. ನನ್ನನ್ನು ತಬ್ಬಿಕೊಂಡವಳೇ ಗೊಳೋ ಎಂದು ಅಳಲು ಶುರು ಮಾಡಿದಳು. ‘’ನನ್ನಿಂದ ಒಂದು ತಪ್ಪಾಗಿದೆ. ಕ್ಷಮಿಸಲಾರದ ತಪ್ಪು ಅದು. ಆದ್ರೂ ಕ್ಷಮಿಸಿ ಅಂತ ನಾಚಿಕೆ ಬಿಟ್ಟು ಕೇಳುತ್ತಿದ್ದೀನಿ. ಕ್ಷಮಿಸ್ತೀರಿ ಅಲ್ವಾ’’ ಅಂತ ಅಳುತ್ತಲೇ ಕೇಳಿದ್ಲು. ‘’ಮೊದಲು ಕಣ್ಣೊರಸಿಕೊಂಡು ಏನಾಯ್ತು ಅಂತ ಹೇಳು’’ ಅಂದೆ.

ಕೆಎಎಸ್ ಆಫೀಸರ್ ಆಗಿದ್ದ ನನಗೆ ಓಡಾಡಲು ಸರ್ಕಾರದಿಂದ ಅಂಬಾಸಿಡರ್ ಕಾರ್ ಕೊಟ್ಟಿದ್ದರು. ಕುಮಾರ್ ಅಂತ ಕಾರಿನ ಡ್ರೈವರ್. ತುಂಬಾ ಒಳ್ಳೆಯ ಹುಡುಗ.  ಒತ್ತಾಯ ಮಾಡಿ ಕರೆದ್ರೆ ಮಾತ್ರ ಮನೆ ಒಳಗೆ ಬರುತ್ತಿದ್ದ. ನನ್ನವಳು ಶಾಪಿಂಗ್ ಹೋಗಬೇಕಾದ್ರೆ ಕುಮಾರ್ ಗೆ ಹೇಳಿ ಕಳುಹಿಸುತ್ತಿದ್ದಳು. ಅಂದು ನನ್ನವಳು ಶಾಪಿಂಗ್ ಮುಗಿಸಿಕೊಂಡು ಬಂದವಳು ಕುಮಾರ್ ಗೆ ಶಾಪಿಂಗ್ ಮಾಡಿದ ಸಾಮಾನನ್ನು ಸ್ವಲ್ಪ ಒಳಗೆ ತಂದು ಕೊಡುತ್ತೀಯಾಪ್ಪಾ ಅಂತ ಕೇಳಿದಳು. ಅವನು ಒಂದೊಂದೇ ಸಾಮಾನನ್ನು ಮನೆ ಒಳಗೆ ತಂದು ಇಡುತ್ತಿದ್ದ. ಮನೆಯಲ್ಲಿ ಇಬ್ಬರನ್ನು ಬಿಟ್ಟರೆ ಯಾರೂ ಇಲ್ಲ. ಅವಳಿಗೆ ಏನನಿಸಿತೋ ಏನೋ ಇದ್ದಕ್ಕಿದ್ದಂತೆ ಅವನ ಕೈ ಹಿಡಕೊಂಡವಳೇ ನನಗೆ ಒಂದು ಸಹಾಯ ಮಾಡುತ್ತೀಯಾಪ್ಪಾ ಅಂತ ಕೇಳಿದಳು. ಜಾಸ್ತಿ ಮಾತಾಡದಿದ್ದ ಅವನು ಕಣ್ಣು ಪಿಳಿಪಿಳಿ ಬಿಡಲಾರಂಭಿಸಿದ. ಅವಳು ಇನ್ನೂ ಹತ್ತಿರ ಬಂದು, ‘’ನಿನಗೆ ಗೊತ್ತೇ ಇದೆ ನನಗೆ ಮಕ್ಕಳಿಲ್ಲ ಎಂದು. ಬಂಜೆ ಅನ್ನಿಸಿಕೊಂಡು ಸಾಕಾಗಿದೆ. ನನ್ನಲ್ಲಿ ಮಕ್ಕಾಳಾಗೋ ಎಲ್ಲಾ ಸಾಧ್ಯತೆ ಇದೆ. ನನಗೆ ತಾಯಿ ಆಗೋ ಭಾಗ್ಯ ಕರುಣಿಸುತ್ತೀಯಾಪ್ಪಾ. ನಿನ್ನ ಕೈ ಮುಗಿದು ಬೇಡಿಕೊಳ್ಳುತ್ತೇನೆ. ಮತ್ತೆ ಯಾವತ್ತೂ ನಿನ್ನನ್ನು ಕಣ್ಣೆತ್ತಿ ಸಹಾ ನೋಡುವುದಿಲ್ಲ. ನೋಡು ನಿನಗೆ ಒಪ್ಪಿಗೆ ಇದ್ದಲ್ಲಿ ನಾಳೆ ಇದೇ ಸಮಯಕ್ಕೆ ನೀನು ಇಲ್ಲಿ ಇರ್ತಿಯ. ಕಾಯುತ್ತಿರುತ್ತೇನೆ’’ ಅಂದಳು. ಮರುದಿನ ಎಣ್ಣೆ ನೀರು ಸ್ನಾನ ಮಾಡಿ ಅವಳು ಅವನಿಗೋಸ್ಕರ ಕಾಯುತ್ತಿದ್ದಳು. ಅವನು ಸಂಕೋಚದಿಂದ ಹೆದರುತ್ತಲೇ ಮನೆಯೊಳಗೆ ಕಾಲಿರಿಸಿದ. ಹುಚ್ಚು ಸಂತೋಷ ಜೊತೆಗೆ ಭಯ ಅವಳಲ್ಲಿ ಕಾಣುತ್ತಿತ್ತು. ಅವರಿಬ್ಬರಲ್ಲಿ ಅದು ನಡೆದು ಹೋಗಿತ್ತು. ಅವಳು ಅಂದುಕೊಂಡಂತೆ ಮುಂದಿನ ತಿಂಗಳು ಅವಳು ಮುಟ್ಟಾಗಲಿಲ್ಲ. ಅಬ್ಬಾ ಕೊನೆಗೂ ನಾನು ತಾಯಿಯಾಗುತ್ತಿದ್ದೇನೆ ಎಂದು ಎದೆ ಸಂತೋಷದಿಂದ ಬೀಗುತ್ತಿತ್ತು. ಜೊತೆಯಲ್ಲಿ ಈ ವಿಷಯ ಹೇಗೆ ಹೇಳಲಿ ಅನ್ನುವ ಭಯ ಕೂಡಾ ಕಾಡುತ್ತಿತ್ತು.

ಅಂದು ಈ ವಿಷಯವನ್ನು ಚಾಚೂ ತಪ್ಪದೆ ನನ್ನಲ್ಲಿ ಬಿಚ್ಚಿಟ್ಟಿದ್ದಳು. ತಲೆ ಬಿಸಿ ಆಗಿ ಒಂದು ಕ್ಷಣ ಏನೂ ಮಾಡಲು ತೋಚಲಿಲ್ಲ. ಕಣ್ಣು ಮುಚ್ಚಿಕೊಂಡು ನಿದ್ದೆ ಬಂದವನಂತೆ ಮಲಗಿ ಯೋಚಿಸತೊಡಗಿದೆ. ಇದರಲ್ಲಿ ಅವಳ ತಪ್ಪು ಏನೂ ಇಲ್ಲ. ಬೇರೆ ಹೆಣ್ಣಾಗಿದ್ರೆ ಬಹುಷ: ನನ್ನಲ್ಲಿಯೇ ದೋಷವಿರುವುದನ್ನು ತಿಳಿದು ರಂಪ ಮಾಡಿ ಎಲ್ಲರಿಗೂ ವಿಷಯ ಗೊತ್ತಾಗುವಂತೆ ಮಾಡಿ ನನ್ನ ಹಾಗೂ ನನ್ನ ಮನೆಯ ಮರ್ಯಾದೆ ತೆಗೆಯುತ್ತಿದ್ದಳು ಅಥವಾ ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಳ್ಳಬಹುದಿತ್ತು. ಇವಳು ಹಾಗೆ ಮಾಡಲಿಲ್ಲ ಎಲ್ಲಾ ವಿಷಯವನ್ನು ಚಾಚೂ ತಪ್ಪದೆ ನನಗೆ ಒಪ್ಪಿಸಿದ್ದಾಳೆ. ಅನಾಥ ಮಗುವನ್ನು ದತ್ತು ತೆಗೆದುಕೊಳ್ಳುವ ಬದಲು ಇದು ಬೆಟರ್ ಅಲ್ವಾ  ನಾನು ಅತಿಯಾಗಿ ಪ್ರೀತಿಸುವ ನನ್ನವಳ ರಕ್ತವನ್ನಾದರೂ ಹಂಚಿಕೊಳ್ಳುತ್ತಲ್ಲಾ ಆ ಮಗು. ಪುರಾಣ ಕಾಲದಲ್ಲೂ ಈ ರೀತಿ ನಡೆದಿತ್ತಲ್ವಾ. ಧೃತರಾಷ್ಟ್ರ, ಪಾಂಡು, ವಿಧುರ ಹಾಗೂ ಪಾಂಡವರ ಜನನ ಕೂಡಾ ಇದೇ ರೀತಿ ಅಲ್ವಾ ಆಗಿದ್ದು.

ಕುಮಾರ್ ನನ್ನು ನೋಡಿದಾಗಲೆಲ್ಲಾ ಒಂಥರಾ ಹಿಂಸೆ ಆಗುತ್ತಿತ್ತು. ಅವನನ್ನು ಬೇರೆ ಊರಿಗೆ ವರ್ಗಾಯಿಸಿ ಆ ಜಾಗಕ್ಕೆ ಬೇರೊಬ್ಬ ಡ್ರೈವರ್ ನನ್ನು ಬದಲಾಯಿಸಿದೆ. ಸ್ವಲ್ಪ ದಿನ ಅವಳ ಕಣ್ಣು ತಪ್ಪಿಸಿ ಓಡಾಡಿದೆ. ಅದನ್ನು ಅವಳಿಂದ ಸಹಿಸಲಾಗುತ್ತಿರಲಿಲ್ಲ. ತುಂಬಾ ಕಷ್ಟ ಪಡುತ್ತಿದ್ದಳು. ಬಸುರಿ ಹುಡುಗಿ ನಾನು ಹೀಗೆ ಮಾಡೋದು ಸರೀನಾ. ನಾನೂ ದೂರ ಮಾಡಿದ್ರೆ ಅವಳಿಗೆ ಯಾರಿದ್ದಾರೆ. ಮನಸ್ಸು ತಿಳಿಯಾಗಿ ಮನೆಗೆ ಬಂದವನೇ ಅವಳನ್ನು ಅಪ್ಪಿಕೊಂಡು ಸಮಾಧಾನಪಡಿಸಿದೆ. ಡಾಕ್ಟರಲ್ಲಿ ಕರೆದುಕೊಂಡು ಹೋದೆ. ನಾನು, ಅವಳು ಹಾಗೂ ಅವನು ಮೂವರು ಬಿಟ್ಟರೆ ಬೇರಾರಿಗೂ ಸತ್ಯ ಗೊತ್ತಾಗಲಿಲ್ಲ. ಗೊತ್ತಾಗೋದೂ ಇಲ್ಲ. ಗೊತ್ತಾಗೋದೂ ಬೇಡ. ಇಂದು ನಾನು, ನನ್ನ ಹೆಂಡತಿ ಹಾಗೂ ನನ್ನ ಮಗ ನಮ್ಮ ಚಿಕ್ಕ ಸಂಸಾರ ತುಂಬಾ ಚೆನ್ನಾಗಿದೆ. ಯಾರ ದೃಷ್ಟಿಯೂ ತಾಗದೆ ಇರಲಿ.

*****