Thursday 18 September 2014

ಎಟಿಎಂ


ಮನೆಯಲ್ಲಿ  ಕಿತ್ತು ತಿನ್ನುವ ಬಡತನ. ಕೆಲಸಕ್ಕೆ ಹೋಗದೆ ಮೂರು ಹೊತ್ತೂ ಮನೇಲೇ ಬಿದ್ದಿರುತ್ತಿದ್ದ ಅಪ್ಪ.  ಅಮ್ಮ ಕಸ ಮುಸುರೆ ತಿಕ್ಕಿ ನಮಗೆ ಇಷ್ಟು ಮಾತ್ರ ವಿದ್ಯೆ ಕೊಡಿಸಿದ್ದಳು. ನಾವು ನಾಲ್ಕು ಜನ ಮಕ್ಕಳು. ನಾನೇ ಹಿರಿಯವಳು. ಪಿ.ಯು.ಸಿ. ಓದಿದವಳೇ ಸಣ್ಣ ಕಂಪೆನಿಯಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದೆ. ನನ್ನ ಜೊತೇಲಿ ಕೆಲಸಕ್ಕೆ ಸೇರಿಕೊಂಡವಳೇ ಶೈಲಾ. ಡಾಟಾ ಎಂಟ್ರಿ ಆಪರೇಟರ್ ಆಗಿ ಇಬ್ಬರೂ ಒಟ್ಟಿಗೇ ಕೆಲಸಕ್ಕೆ ಸೇರಿದ್ದೆವು. ಆವಾಗಿನಿಂದ ನಾವು ಜೀವದ ಗೆಳತಿಯರಾಗಿದ್ದೆವು.  ಒಂದೇ ದಿನ ಕೆಲಸಕ್ಕೆ ಸೇರಿಕೊಂಡಿದ್ದರಿಂದ ಒಬ್ಬರನ್ನೊಬ್ಬರು ಬಿಟ್ಟಿರುತ್ತಿರಲಿಲ್ಲ. ಕಾಫೀ, ಊಟ ಎಲ್ಲಾ ಜೊತೇಲೇ ಆಗುತ್ತಿತ್ತು. ಸಾಲರಿ ಡ್ರಾ ಮಾಡಲು ಎಟಿಎಂ ಕಾರ್ಡ್ ಕೊಟ್ಟಿದ್ದರು. ಅದನ್ನು ತಗೊಳ್ಳಲೂ ಜೊತೇಲೆ ಹೋಗುತ್ತಿದ್ದೆವು.

      ತಂಗಿಗೆ ಎಸ್.ಎಸ್.ಎಲ್.ಸಿ. ಎಕ್ಸಾಮ್ ಫೀಸ್ ಕಟ್ಟಲು ನಾಳೆ ಕೊನೆ ದಿನ. ಇಂದು ಆಫೀಸಿಗೆ ಹೊರಡುವಾಗಲೇ ನೆನಪಿಸಿದ್ದಳು. ನನ್ನ ಅಕೌಂಟ್ ನಲ್ಲಿ ಮಿನಿಮಮ್  ಎಷ್ಟಿರಬೇಕೋ ಅಷ್ಟು ಮಾತ್ರ ದುಡ್ಡಿತ್ತು. ಮಧ್ಯಾಹ್ನ ಊಟ ಮುಗಿಸಿ ನಾನು ಶೈಲಾ ಒಂದು ರೌಂಡ್ ಹೋಗಿ ಬರುತ್ತಿದ್ದೆವು. ಕ್ಲಾಕ್ ರೂಂಗೆ ಹೋಗುವಾಗ ಅವಳು ಕೈಯಲ್ಲಿದ್ದ ಪರ್ಸ್ ಮೊಬೈಲ್ ನನ್ನ ಕೈಯಲ್ಲಿ ಕೊಡುತ್ತಿದ್ದಳು. ಅಂದು ಕೂಡಾ ಹಾಗೇ ಮಾಡಿದಳು. ಎದುರಿಗೇ ಎಸ್.ಬಿ.ಎಂ.ನ  ಎಟಿಎಂ ಇತ್ತು. ಧೈರ್ಯ ಮಾಡಿ ಎಟಿಎಂ.ಗೆ ಹೋದವಳೇ ಅವಳ ಪರ್ಸ್ ನಿಂದ ಎಟಿಎಂ ಕಾರ್ಡ್ ತಗೊಂಡು ಎರಡು ಸಾವಿರ ರೂಪಾಯಿ ಡ್ರಾ ಮಾಡಿದೆ.  ಅವಳು ಹಣ ತೆಗೆಯುವಾಗಲೆಲ್ಲಾ ನಾನು ಕೂಡಾ ಒಳಗೆ ಹೋಗುತ್ತಿದ್ದುದರಿಂದ ಅವಳ ಪಾಸ್ ವರ್ಡ್ ನಂಬರ್ ಚೆನ್ನಾಗಿಯೇ ಗೊತ್ತಿತ್ತು. ಮೊಬೈಲ್ ನಲ್ಲಿ ಮೆಸೇಜ್ ಡಿಲೀಟ್ ಮಾಡಿದೆ. ಏನೂ ಆಗಿಲ್ಲದಂತೆ ನಟಿಸಿದೆ. ಅವಳಿಗೆ ಗೊತ್ತಾಗಲೇ ಇಲ್ಲ.

      ಅಮ್ಮ ಹಾಸಿಗೆ ಹಿಡಿದಿದ್ದಳು. ಅವಿರತ ವಿರಾಮವಿಲ್ಲದೆ ದುಡಿದಿದ್ದಕ್ಕೆ ಅವಳಿಗೆ ಟಿಬಿ ಬಳುವಳಿಯಾಗಿ ಬಂದಿತ್ತು. ಅಕೌಂಟ್ ನಲ್ಲಿ ಮಿನಿಮಮ್ ಬಿಟ್ಟರೆ ಬೇರೆ ದುಡ್ಡಿಲ್ಲ. ಏನು ಮಾಡೋದು. ಮೊದಲು ಒಂದು ಸಲ ಶೈಲಾಳ ಎಟಿಎಂ ಕಾರ್ಡ್ ನಿಂದ ತೆಗೆದಿದ್ದೆನಲ್ಲ.  ಇನ್ನೊಂದು ಸಲ ಪ್ರಯತ್ನಿಸಿದರೆ ಹೇಗೆ. ರೌಂಡ್ಸ್ ಹೋಗೋಣ ಅಂತ ಅವಳನ್ನು ಕರೆದುಕೊಂಡು ಹೋದೆ. ಲಕ್ಷಗಟ್ಟಲೆ ಹಣ ಇರುವಾಗ 10 ಸಾವಿರ ತಗೊಂಡ್ರೆ ಗೊತ್ತಾಗಲಿಕ್ಕಿಲ್ಲ ಅಂತ ಧೈರ್ಯ ಮಾಡಿ ತೆಗೆದೇ ಬಿಟ್ಟೆ.

ಪಾಸ್ ಬುಕ್ ಎಂಟ್ರಿ ಮಾಡಲು ಹೋದಾಗ ಅವಳಿಗೆ ಗೊತ್ತಾಗಿ ಹೋಯಿತು. ತಲೆಯಲ್ಲಿ ಹುಳು ಬಿಟ್ಟಂಗಾಯ್ತು.  ಯಾರು ತೆಗೆದಿರಬಹುದು ಅಂತ ಒಂದೇ ಸಮನೆ ಯೋಚನೆ ಮಾಡುತ್ತಿದ್ದಳು. ಅವಳಿಗೆ ಬಾಸ್ ತುಂಬಾ ಕ್ಲೋಸ್ ಆಗಿದ್ದರು. ಅವರಲ್ಲಿ ಎಲ್ಲಾ ವಿಷಯವನ್ನೂ ತಿಳಿಸಿದಳು. ಅವರು ಎನ್ ಕ್ವಯರಿ ಮಾಡಿದರು. ನಾನು ಸಿಕ್ಕಿ ಬಿದ್ದಿದ್ದೆ. ಕೊನೆಗೆ ಮನೆಯ ಬಡತನ ಅಮ್ಮನ ಅನಾರೋಗ್ಯದ ವಿಚಾರವೆಲ್ಲಾ ಹೇಳಿ ತಪ್ಪು ಒಪ್ಪಿಕೊಂಡು ಬಿಟ್ಟೆ. ಇದೊಂದು ಸಲ ಕ್ಷಮಿಸಿ ಇನ್ನೆಂದೂ ಇಂತಹ ತಪ್ಪು ಮಾಡೋದಿಲ್ಲ ಅಂತ ಗೋಗರೆದೆ. ನಿನಗೆ ಕಷ್ಟವಿದ್ದರೆ ನಮಗೆ ಹೇಳಿದಿದ್ರೆ ಸಹಾಯ ಮಾಡುತ್ತಿದ್ದೆವು. ಇಂತಹ ಕೆಲಸ ಮಾಡಿದ್ದು ತಪ್ಪು ಎಂದು ಮುಲಾಜಿಲ್ಲದೆ ಮನೆಗೆ ಕಳುಹಿಸಿಬಿಟ್ರು. ಅದೊಂದು ಕಪ್ಪು ಚುಕ್ಕೆ ನನ್ನ ಜೀವನದಲ್ಲಿ ಸೇರ್ಕೊಂಡು ಬಿಡ್ತು. ಈಗಿನ ಕಾಂಪಿಟೀಷನ್ ಯುಗದಲ್ಲಿ ಎಲ್ಲಿ ಹೋದರೂ ನನ್ನ ಅರ್ಹತೆಗೆ ಯಾವ ಕೆಲಸವೂ ಸಿಗಲಿಲ್ಲ. ಎರಡು ವರ್ಷದ ಅನುಭವ ಕೂಡಾ ಕೆಲಸಕ್ಕೆ ಬರಲಿಲ್ಲ. ಮುಂದಾಲೋಚನೆ ಇಲ್ಲದೆ ಮಾಡಿದ ತಪ್ಪಿನಿಂದ ಇಂದಿಗೂ ಯಾವ ಕೆಲಸವೂ ಇಲ್ಲದೆ ಕೊರಗುತ್ತಿದ್ದೇನೆ.

*****