Tuesday, 21 February 2012

ನಾ ಕಂಡ ಒಂದು ಮದುವೆ


ಕೆಲಸ ಅರಸಿಕೊಂಡು ಬರುವ ಬಿಜಾಪುರದವರು ನಮ್ಮ ಮನೆಗೆ ಸ್ವಲ್ಪ ದೂರದಲ್ಲಿ ಟೆಂಟ್ ಹಾಕಿಕೊಂಡಿದ್ದರು. ನಮ್ಮ ಮನೆಯ ಟ್ಯಾರಿಸ್ ಮೇಲೆ ನಿಂತರೆ ಅವರ ಟೆಂಟ್ ಗಳು ಕಾಣುತ್ತಿತ್ತು. ಸಾಯಂಕಾಲ ಆಯಿತೂಂದ್ರೆ ರೊಟ್ಟಿ ತಟ್ಟೋ ಕೆಲ್ಸ. ಗ್ರಾನೈಟ್ ಕಲ್ಲಿನ ಮೇಲೆ ಜೋಳದ ರೊಟ್ಟಿ ತಟ್ಟೋದೇ ಒಂದು ಚೆಂದ.

ಒಂದು ದಿನ ಟ್ಯಾರಿಸ್ ಮೇಲೆ ನಿಂತುಕೊಂಡಿದ್ದೆವು. ಟೆಂಟ್ ಗಳಲ್ಲಿ ಬೆಳಕು ಕಾಣಿಸುತ್ತಿತ್ತು. ಎದುರು ಮನೆಯಿಂದ ಕೇಬಲ್ ಎಳೆದು ಎರಡು ಟ್ಯೂಬ್ ಲೈಟ್ ಹಾಕಲಾಗಿತ್ತು. ಒಂದು ಟೆಂಟ್ನ ಒಂದು ಪುಟ್ಟ ಹುಡುಗಿ ಸುಮಾರು 15-16 ವರ್ಷ ಇರಬಹುದು. ಅದಕ್ಕೆ ಸೀರೆ ಉಡಿಸಲಾಗಿತ್ತು. ಇನ್ನೊಂದು ಟೆಂಟ್ ನಿಂದ ಒಬ್ಬ ಹುಡುಗ ಒಂದು ಪಂಚೆ ಬಿಳಿ ಷರ್ಟ್ ಹಾಕಿ ರೆಡಿ ಆಗಿದ್ದ. ಇಬ್ಬರ ಕೈಯಲ್ಲಿ ಒಂದೊಂದು ಕಾಕಡ ಹೂವಿನ ಹಾರ. ಇಬ್ಬರೂ ಹಾರ ಬದಲಾಯಿಸಿಕೊಂಡರು. ಅಷ್ಟೆ ಮದುವೆ ಆಯಿತು. ಫೋಟೋಗ್ರಾಫರ್ ಒಂದು ಗ್ರೂಫ್ ಫೋಟೋ ತೆಗೆದ.  ನಂತರ ಮುಯ್ಯಿ. ಒಬ್ಬ ಒಂದು ಪುಸ್ತಕ ಪೆನ್ ಇಟ್ಟುಕೊಂಡು ನಿಂತಿದ್ದ. ಒಬ್ಬ ಬಂದವನೇ ಸಂಗಪ್ಪ 10 ರೂಪಾಯಿ ಅಂದ. ಇವನು ಬರಕೊಂಡ. ಇನ್ನೊಬ್ಬ ಬಂದ ಭೀಮಪ್ಪ 5 ರೂಪಾಯಿ. ಬಾಳಪ್ಪ 5 ರೂಪಾಯಿ.. ಧರಮಪ್ಪ 5 ರೂಪಾಯಿ ಹೀಗೆ ಒಬ್ಬೊಬ್ಬರು ಬಂದವರೇ ಕೂಗಿ ಹೇಳುತ್ತಿದ್ದರು. ಇವನು ಬರಕೊಳ್ಳುತ್ತಿದ್ದ.

ಆಮೇಲೆ ಊಟ. ಕೆಲವು ಹೆಂಗಸರು ರೊಟ್ಟಿ ತರಹನೇ ಏನೋ ತಟ್ಟುತ್ತಿದ್ದರು. ಬಹುಷ: ಒಬ್ಬಟ್ಟು ಇರಬಹುದು. ನೆಂಟರಿಷ್ಟರು ಸೇರಿದ್ದರು. ಎಲ್ಲರಿಗೂ ನೆಲದ ಮೇಲೆ ಕೂಡಿಸಿ ಮುತ್ತುಗದ ಎಲೆ ಹಾಕಲಾಯಿತು. ಒಂದೊಂದು ಒಬ್ಬಟ್ಟು ಹಾಕಲಾಯಿತು. ಆಮೇಲೆ ಅನ್ನ, ಸಾರು. ಅಷ್ಟೆ. ಮದುವೆ ಮುಗಿಯಿತು.

ಕೆಲವು ಮದುವೆಗಳಲ್ಲಿ ತಟ್ಟೆಯಲ್ಲಿ, ಎಲೆಯಲ್ಲಿ ವೇಸ್ಟ್ ಮಾಡುವ ಆಹಾರದಲ್ಲಿ ಇಂತಹ ಎಷ್ಟು ಮದುವೆಗಳನ್ನು ಮಾಡಬಹುದಲ್ವಾ? ತಮಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಯಾಕೆ ಹಾಕಿಸಿಕೊಳ್ಳಬಾರದು?  ತಮಗೆ ಇಷ್ಟವಿಲ್ಲದನ್ನು ಹಾಕೋಕೆ ಮುಂಚೇನೆ ಬೇಡ ಅಂತ ಹೇಳಬಹುದಲ್ಲಾ. ಎಲೆ ತುಂಬಾ ಹಾಕಿಸಿಕೊಂಡು ಕಾಟಾಚಾರಕ್ಕೆ ತಿಂದಂತೆ ಮಾಡಿ ಉಳಿದದ್ದನ್ನು ವೇಸ್ಟ್ ಮಾಡುವುದು ಅದೇನು ಹೆಚ್ಚುಗಾರಿಕೆ? ಆಕಸ್ಮಾತ್ ಉಳಿದರೂ ಅನಾಥಾಶ್ರಮಕ್ಕೆ ನೀಡಬಹುದಲ್ಲಾ. ಆ ಒಂದು ದಿನವಾದರೂ ಅನಾಥ ಮಕ್ಕಳ ಹೊಟ್ಟೆ ತುಂಬಿದ ನಗುವಿಗೆ ಕಾರಣರಾಗಬಹುದಲ್ಲಾ. ಈಗಿನ ಕಾಲದಲ್ಲಿ ಬೆಲೆ ಏರಿಕೆಯಿಂದಾಗಿ ಯಾವುದರ ಬೆಲೆಯೂ ಕಡಿಮೆ ಇಲ್ಲ. ಮದುವೆ ಮಾಡಿಸುವವರು ಕೂಡಾ ಸಿಕ್ಕಾಪಟ್ಟೆ ಐಟಂಗಳನ್ನು ಮಾಡಿಸದೆ ಅವಶ್ಯಕವಾದಷ್ಟು ಮಾತ್ರ ಮಾಡಿಸುವುದು ಸೂಕ್ತ ಅಂತ ಅನ್ನಿಸುವುದಿಲ್ಲವೇ?


No comments:

Post a Comment