Tuesday, 22 January 2013

ಪುನರಪಿ ಜನನಂ....


ಪುನರಪಿ ಜನನಂ ಪುನರಪಿ ಮರಣಂ ಇದು ಸೃಷ್ಟಿಯ ನಿಯಮ.

ಮೃತ್ಯು ನಂತರ ಜೀವಾತ್ಮವು ಸೂಕ್ಷ್ಮ ಶರೀರ ಧಾರಣೆ ಮಾಡಿ ಪಾಪ ಪುಣ್ಯಗಳ ಫಲವಾಗಿ ಸ್ವರ್ಗ ಅಥವಾ ನರಕವನ್ನು ಅನುಭವಿಸುತ್ತದೆ. ನಂತರ ಅದರ ಪುನರ್ಜನ್ಮವಾಗುತ್ತದೆ ಅಥವಾ ಮೋಕ್ಷ ಪ್ರಾಪ್ತಿಯಾಗುತ್ತದೆ. ಕೇವಲ ಮನುಷ್ಯನಿಗೆ ಮಾತ್ರ ಮರಣ ನಂತರ ಸೂಕ್ಷ್ಮ ಶರೀರ ಪ್ರಾಪ್ತಿಯಾಗುತ್ತದೆ. ಇಹಲೋಕ ಹಾಗೂ ಪರಲೋಕದಲ್ಲಿಯೂ ಶುಭ ಮತ್ತು ಅಶುಭ ಕರ್ಮಗಳ ಶುಭ ಮತ್ತು ಅಶುಭ ಫಲಗಳನ್ನು ಮನುಷ್ಯ ಅನುಭವಿಸುತ್ತಾನೆ.

ಸ್ತ್ರೀ ಮತ್ತು ಪುರುಷನ ಸಂಭೋಗದಿಂದ ತಾಯಿಯ ಗರ್ಭದಲ್ಲಿ ಜೀವಿಯ ಉತ್ಪತ್ತಿಯಾಗುತ್ತದೆ. ದೈವ ಪ್ರೇರಣೆಯಿಂದ ಆ ಜೀವಿಗೆ ಶರೀರ ಪ್ರಾಪ್ತಿ ಹೊಂದಲು ಒಂದು ತಿಂಗಳಲ್ಲಿ ಶಿರ, ಎರಡು ತಿಂಗಳಲ್ಲಿ ತೋಳು ಇತ್ಯಾದಿ ಶರೀರದ ಅಂಗಗಳು, 3ನೇ ತಿಂಗಳಲ್ಲಿ ಉಗುರು, ರೋಮ, ಅಸ್ತಿ, ಚರ್ಮ ಹಾಗೂ ಲಿಂಗ, 4ನೇ ತಿಂಗಳಲ್ಲಿ ರಕ್ತಮಾಂಸ, 5ನೇ ತಿಂಗಳಲ್ಲಿ ಹಸಿವು, ದಾಹ ಜನ್ಮ ತಳೆಯುತ್ತವೆ. 6ನೇ ತಿಂಗಳಲ್ಲಿ ಜರಾಯುವಿನಲ್ಲಿ ಸುತ್ತಿಕೊಂಡ ಜೀವ ತಾಯಿಯ ಎಡಗರ್ಭದಲ್ಲಿ ತಿರುಗುತ್ತದೆ. (ಜರಾಯು ಅಂದ್ರೆ ಬೆಳವಣಿಗೆಯಾಗುತ್ತಿರುವ ಭ್ರೂಣವನ್ನು ಗರ್ಭಾಶಯದ ಭಿತ್ತಿಗೆ ಜೋಡಿಸುವ ಒಂದು ಅಂಗ. ಇದು ತಾಯಿಯಿಂದ ರಕ್ತದ ಪೂರೈಕೆ, ವ್ಯರ್ಥ ಪದಾರ್ಥಗಳ ವಿಸರ್ಜನೆ ಹಾಗೂ ಅನಿಲದ ವಿನಿಮಯ ಮಾಡುತ್ತದೆ).

ತಾಯಿಯಿಂದ ತಿಂದ ಕುಡಿದ ಅನ್ನಾದಿಗಳಿಂದ ಆ ಜೀವವು ಮಲಮೂತ್ರದ ದುರ್ಗಂಧಯುಕ್ತ ಗುಂಡಿಯ ರೂಪದ ಗರ್ಭಾಶಯದಲ್ಲಿ ಮಲಗಿರುತ್ತದೆ. ಅಲ್ಲಿ ಹಸಿದ ಅನ್ಯ ಕ್ರಿಮಿಗಳಿಂದ ಆ ಜೀವಿಯ ಅಂಗಗಳು ಕಚ್ಚಲ್ಪಡುತ್ತದೆ. ತಾಯಿಯ ಮೂಲಕ ಸೇವಿಸಲ್ಪಡುವ ಒಗರು, ಉಪ್ಪು, ಖಾರ, ಹುಳಿ ಪದಾರ್ಥಗಳ ಅತಿ ಉತ್ತೇಜಕ ಸ್ಪರ್ಶದಿಂದ ಜೀವಿಯ ಎಲ್ಲಾ ಅಂಗಗಳಲ್ಲಿ ವೇದನೆ ಉಂಟಾಗುತ್ತದೆ. ಜರಾಯುವಿನಿಂದ ಸುತ್ತಿಕೊಂಡ ಆ ಜೀವ ಹೊರಗಿನಿಂದ ಕರುಳುಗಳಿಂದ ಆವರಿಸಲ್ಪಟ್ಟಿರುತ್ತದೆ. ಆ ಜೀವವು ತನ್ನ ಅಂಗಗಳಿಂದ ಚಲಿಸಲು ಅಸಮರ್ಥವಾಗಿ ಪಂಜರದಲ್ಲಿನ ಪಕ್ಷಿಯಂತೆ ತಾಯಿಯ ಉದರದಲ್ಲಿ ಶಿರವನ್ನು ಒತ್ತಿ ತಟಸ್ಥವಾಗಿರುತ್ತದೆ. ಭಗವಂತನ ಕೃಪೆಯಿಂದ ತನ್ನ ನೂರಾರು ಜನ್ಮಗಳ ಕರ್ಮಗಳನ್ನು ಸ್ವರಿಸುತ್ತ ಆ ಗರ್ಭಸ್ಥ ಜೀವ ನಿಟ್ಟುಸಿರು ಬಿಡುತ್ತದೆ. ಭಯಭೀತವಾಗಿ ಕೈಜೋಡಿಸಿ ತನ್ನನ್ನು ತಾಯಿಯ ಗರ್ಭದಲ್ಲಿ ಹಾಕಿದ ಭಗವಂತನ ಸ್ಮರಣೆ ಮಾಡುತ್ತದೆ. ಒಂದು ವೇಳೆ ಈ ಗರ್ಭವನ್ನು ದಾಟಿ ನಾನು ಹೊರಗೆ ಬಂದರೆ, ನಿನ್ನ ಚರಣ ಸೇವೆ ಮಾಡುವೆ ಮತ್ತು ಮುಕ್ತಿ ಪ್ರಾಪ್ತಿಯಾಗುವಂತಹ ಕಾರ್ಯದಲ್ಲಿ ತೊಡಗುವೆ. ಮಲಮೂತ್ರದ ಬಾವಿಯಲ್ಲಿ ಬಿದ್ದಿರುವ ಹಾಗೂ ಜಠರಾಗ್ನಿಯಿಂದ ದಗ್ಧನಾಗಿರುವ ನನ್ನನ್ನು ಒಂದು ಸಲ ಈ ಗರ್ಭವನ್ನು ದಾಟಿ ಹೊರಗೆ ಬರುವಂತೆ ಮಾಡು ಎಂದು ತನಗೆ ವಿಶೇಷ ಜ್ಞಾನವನ್ನು ನೀಡಿರುವ ಭಗವಂತನನ್ನು ಶರಣು ಹೋಗುತ್ತದೆ.

10ನೇ ತಿಂಗಳಲ್ಲಿ ಪ್ರಸೂತಿ ಮಾರ್ಗದ ದ್ವಾರದ ಕೆಳಗೆ ಶಿರ ಮಾಡಿ ಕೂಡಲೇ ಕೆಳಗೆ ಬೀಳಿಸಲಾದ ಆ ಜೀವ ಅತ್ಯಂತ ಕಠಿಣತೆಯಿಂದ ಹೊರಗೆ ಬರುತ್ತದೆ. ಆ ಸಮಯ ಅದಕ್ಕೆ ಉಸಿರಾಡಲು ಆಗುವುದಿಲ್ಲ ಹಾಗೂ ನೆನಪು ನಷ್ಟವಾಗಿ ಹೋಗುತ್ತದೆ. ಜ್ಞಾನ ನಷ್ಟವಾಗಿ ಹೋಗುವ ಕಾರಣ ಅತ್ಯಧಿಕ ರೋಧನ ಮಾಡತೊಡಗುತ್ತದೆ. ಜೀವಿ ಗರ್ಭದಿಂದ ಹೊರಬಂದಾಗ ವೈಷ್ಣವಿ ಮಾಯೆಯ ಸ್ವರ್ಶದಿಂದ ಎಲ್ಲವನ್ನೂ ಮರೆತುಬಿಡುತ್ತದೆ. ಮಾಯೆಯ ಹಿಡಿತದಲ್ಲಿ ಈ ಬದುಕನ್ನೇ ಶಾಶ್ವತ ಎಂದು ತಿಳಿದ ಜೀವಾತ್ಮ ಬದುಕಿನುದ್ದಕ್ಕೂ ತಪ್ಪುಗಳನ್ನು ಮಾಡುತ್ತಾ ಬರುತ್ತದೆ.

ಶಾಸ್ತ್ರಗಳು ಹೇಳುವಂತೆ ಭೂಮಿಯಲ್ಲಿ 84ಲಕ್ಷ ಯೋನಿಗಳಿವೆ. ಈ ಎಲ್ಲಾ ಯೋನಿಗಳಲ್ಲಿ ಜನ್ಮ ತಾಳಿದ ನಂತರ ಮನುಷ್ಯ ಜನ್ಮ ಪ್ರಾಪ್ತಿಯಾಗುತ್ತದೆ. ಪಂಚೇಂದ್ರಿಯಗಳು ಪರಿಪೂರ್ಣವಾಗಿದ್ದು, ರೂಪ, ರಸ, ಗಂಧ, ಸ್ಪರ್ಶ, ಶಬ್ಧಗಳನ್ನು ಅನುಭವಿಸುವ ಯೋಗ್ಯತೆ ಮನುಷ್ಯ ಜನ್ಮದಲ್ಲಿ ಮಾತ್ರ ಇರುತ್ತದೆ. ಮಾನವ ಜನ್ಮದ ಮಹತ್ವವನ್ನು ಅರಿತು ಕಾಮ, ಕ್ರೋಧ, ಲೋಭ, ಮೋಹ, ಮದ ಮಾತ್ಸರ್ಯಗಳನ್ನು ಮೀರಿ ಬಾಳಿದರೆ ಪುನರಪಿ ಜನನಂ ಪುನರಪಿ ಮರಣಂ ಎಂಬ ಜನ್ಮಾಂತರದ ಬಂಧನದಿಂದ ಬಿಡಿಸಿಕೊಂಡು ಮೋಕ್ಷ ಸಾಧಿಸಬಹುದು. ಕರ್ಮಯೋಗ, ಭಕ್ತಿಯೋಗ ಹಾಗೂ ಜ್ಞಾನಯೋಗ ದಿಂದ ಇದು ಸಾಧ್ಯ.

(ಕೃಪೆ:ಗರುಡ ಪುರಾಣ)

*****

 

Friday, 11 January 2013

ಬದುಕಿನ ಪಾಠ


      ಎಲ್ಲಾ ಫ್ರೆಂಡ್ಸ್ ಹತ್ತಿರಾನೂ ಬೈಕ್ ಇದೆ.  ಬರ್ತಡೇ ಮುಂಚೆ ನನಗೆ ಬೈಕ್ ಕೊಡಿಸಲೇ ಬೇಕು ಎಂದು ಹಠ ಹಿಡಿದು ಬೈಕ್ ತೆಗೆಸಿಕೊಂಡಿದ್ದೆ. ನಮ್ಮದು ಮಧ್ಯಮ ವರ್ಗದ ಕುಟುಂಬ. ಅಪ್ಪ ಲೋನ್ ಮಾಡಿ ಬೈಕ್ ಕೊಡಿಸಿದ್ದರು. ಕಾಲೇಜಿಗೆ ರಜೆ ಇದ್ದ ಕಾರಣ ನಾಲ್ಕು ಬೈಕ್ ಗಳಲ್ಲಿ ಎಂಟು ಜನ ಜಾಲಿ ರೈಡ್ ಹೊರಟಿದ್ದೆವು. ಫಾಸ್ಟ್ ಆಗಿ ಬರುತ್ತಿದ್ದುದನ್ನು ನೋಡಿ ಪಿ.ಸಿ. ನಿಲ್ಲಿಸುವಂತೆ ಸೂಚಿಸಿದ. ಎರಡು ಬೈಕ್ ಗಳಲ್ಲಿ ಇದ್ದವರು ತಪ್ಪಿಸಿಕೊಂಡು ಮುಂದಕ್ಕೆ ಹೊರಟು ಹೋದರು. ನಾನು ಮತ್ತು ಇನ್ನೊಬ್ಬ ಫ್ರೆಂಡ್ ಸಿಕ್ಕಿ ಹಾಕಿಕೊಂಡೆವು. ಪಿ.ಸಿ. ಡಾಕ್ಯುಮೆಂಟ್ ತೋರಿಸಲು ಹೇಳಿದ. ಎಲ್ಲಾ ಕರೆಕ್ಟ್ ಆಗಿ ಇದ್ದುದರಿಂದ ಏನೂ ಮಾಡಲಾಗದೆ ಕೀ ಕಿತ್ತುಕೊಂಡ. ನಾವು ಕೀ ಯಾಕೆ ಕಿತ್ತುಕೊಳ್ಳುತ್ತೀರಿ ಎಂದು ಗಲಾಟೆ ಮಾಡಲು ಪ್ರಾರಂಭಿಸಿದೆವು. ಮುಂದೆ ಹೋಗಿದ್ದ ಫ್ರೆಂಡ್ಸ್ ಕೂಡಾ ಬೈಕ್ ನಿಲ್ಲಿಸಿ ಬಂದು ನಮ್ಮ ಜೊತೆ ಸೇರಿಕೊಂಡರು. ಎರಡು ಬೈಕ್ ಗಳನ್ನು ಸ್ಟೇಷನ್ ಗೆ ತಗೊಂಡು ಹೋದರು. ನಾಳೆ ಕೋರ್ಟಿಗೆ ಬನ್ನಿ ಎಂದು ಹೇಳಿ ನಮ್ಮನ್ನು ಕಳುಹಿಸಿಬಿಟ್ಟರು. ಬಸ್ ಹತ್ತಿ ಕುಳಿತವನೇ ಯೋಚಿಸತೊಡಗಿದೆ. ಅಪ್ಪ ಎಷ್ಟು ಕಷ್ಟಪಟ್ಟು ಬೈಕ್ ಕೊಡಿಸಿದ್ರು. ನಿಧಾನವಾಗಿ ಓಡಿಸು, ಹೆಲ್ಮೆಟ್ ಹಾಕ್ಕೊಂಡು ಹೋಗು. ಲೈಸೆನ್ಸ್ ಗಾಡಿಯಲ್ಲಿ ಇಟ್ಟುಕೋ ಅಂತ ಒಂದಿನಾನೂ ಬಿಡದೆ ಹೇಳುತ್ತಿದ್ದರೂ ನಾನು ಕಿವಿ ಮೇಲೆ ಹಾಕ್ಕೊಳ್ಳುತ್ತಿರಲಿಲ್ಲ.  ಮನೆಗೆ ಬಂದ ತಕ್ಷಣ ಅಳು ತಡೆಯಲಾಗಲಿಲ್ಲ. ಜೋರಾಗಿ ಅತ್ತುಬಿಟ್ಟೆ. ಅಪ್ಪ ಅಮ್ಮ ಇಬ್ಬರೂ ಗಾಬರಿಯಾಗಿ ಮೊದ್ಲು ಅಳೋದು ನಿಲ್ಸು ಏನಾಯ್ತು ಅಂತ ಹೇಳು ಗಾಡಿ ಎಲ್ಲಿ ಅಂತ ಕೇಳುತ್ತಿದ್ದರು. ಅಳುತ್ತಲೇ ವಿಷಯ ತಿಳಿಸಿದೆ. ಎಲ್ಲಾ ಸಮಸ್ಯೆಗೂ ಒಂದು ಪರಿಹಾರ ಇರುತ್ತೆ. ನಾಳೆ ಹೋಗಿ ನೋಡೋಣ ಈಗ ಊಟ ಮಾಡಿ ಮಲಕ್ಕೋ ಎಂದು ಸಮಾಧಾನಪಡಿಸಿದ್ರು.


      ಮರುದಿನ ಅಪ್ಪನ ಜೊತೆ ಸ್ಟೇಷನ್ ಗೆ ಹೋದೆ.  ಪಿ.ಸಿ. ಅಪ್ಪನಲ್ಲಿ ಹುಡುಗ್ರಿಗೆ ಸ್ವಲ್ಪ ಭಯ ಇರ್ಬೇಕು ಸರ್ ನಮ್ಗೇ ರೋಪ್ ಹಾಕ್ತಾರೆ. ರಿಕ್ವೆಸ್ಟ್ ಮಾಡಿದ್ರೆ ಬಿಡ್ತಿದ್ದೆವು. ಅದ್ಕೆ ಸ್ವಲ್ಪ ಹೆದರಿಸ್ಲಿಕ್ಕೆ ಹೀಗೆ ಮಾಡಿದೆವು. ಈಗ ಕೇಸ್ ಫೈಲ್ ಮಾಡಿ ಆಗಿದೆ. ಏನೂ ಮಾಡಲಿಕ್ಕೆ ಆಗೋದಿಲ್ಲ. ನೀವು ಒಂದು ಕೆಲ್ಸ ಮಾಡಿ ನನ್ಗೆ ಗೊತ್ತಿರೋ ಲಾಯರ್ ಒಬ್ರು ಇದ್ದಾರೆ ಅವರ ನಂಬರ್ ಕೋಡ್ತೀನಿ ಅವರನ್ನ ಮೀಟ್ ಮಾಡಿ ಅಂತ ಹೇಳಿ ನಂಬರ್ ಕೊಟ್ರು. ಲಾಯರ್ ಗೆ ಇದೆಲ್ಲ ಮಾಮೂಲು. ಕೋರ್ಟಿಗೆ ಕರ್ಕೊಂಡು ಹೋದ್ರು. ಹೋಗುವಾಗ ಒಂದಷ್ಟು ಬುದ್ಧಿಮಾತು ಹೇಳಿದ್ರು. ಕೋರ್ಟಲ್ಲಿ ನಮ್ಮನ್ನು ಕುಳಿತುಕೊಳ್ಳೋದಕ್ಕೆ ಹೇಳಿ ಒಳಗೆ ಹೋಗಿ ಏನೋ ಮಾತಾಡಿದ್ರು. ಮತ್ತೆ ಬಂದು ಎರಡು ಸಾವಿರ ಕೊಡಲು ಹೇಳಿದ್ರು. ಅಪ್ಪ ಮಾತಾಡದೆ ಎರಡು ಸಾವಿರ ಕೊಟ್ರು. ಮಧ್ಯಾಹ್ನ ಬಂದು ಗಾಡಿ ತಗೊಂಡು ಹೋಗಲು ಹೇಳಿದ್ರು. ಈ ಸಲ  ಬರ್ತಡೇ ಪಾರ್ಟಿಗೆ ಅಪ್ಪನ ಹತ್ರ ದುಡ್ಡು ಕೇಳಬಾರದು ಅಂತ ನಿರ್ಣಯ ಮಾಡಿಕೊಂಡೆ.  ಲಾಯರ್ ಪಿ.ಸಿ.ಗೆ ಪೋನ್ ನಲ್ಲಿ ಹೇಳುತ್ತಿದ್ದರು. ನಾಳೆಯಿಂದ ನೋಡ್ಕೊಂಡು ಸ್ವಲ್ಪ ಜೋರಾಗಿರೋ ಪಾರ್ಟಿಗಳ್ನ ಹಿಡ್ದು ಕಳುಹಿಸಪ್ಪ.

*****