ಕೆಲವು ಮಂದಿ ನಮಗೆ ಗೊತ್ತಿಲ್ಲದೇನೇ
ನಮ್ಮ ಹೃದಯದಲ್ಲಿ ಸ್ಥಾನ ಪಡಕೊಂಡು ಬಿಡುತ್ತಾರೆ. ಅಂತಹವರಲ್ಲಿ ನನ್ನ ಹೃದಯದಲ್ಲಿ ಸ್ಥಾನ ಪಡಕೊಂಡ
ಒಬ್ಬ ಹುಡುಗ ಆದಿತ್ಯ ನಾಡಿಗ್. ಸುವರ್ಣ ವಾಹಿನಿಯಲ್ಲಿ ಬರುತ್ತಿದ್ದ ಸ್ಟಾರ್ ಸಿಂಗರ್ ಪ್ರೋಗ್ರಾಂ
ನಲ್ಲಿ ಫೈನಲ್ ವರೆಗೂ ತಲುಪಿದ್ದ ಹುಡುಗ. ಅವನ ಒಂದು ಪ್ರೋಗ್ರಾಂ ಅನ್ನೂ ಬಿಡದೆ ನೋಡುತ್ತಿದ್ದೆ. ಪ್ರತಿ
ದಿನ ನೋಡುವಾಗಲೂ ಆದಿತ್ಯ ಸೆಲೆಕ್ಟ್ ಆಗಲಿ ಎಂದು ದೇವರಲ್ಲಿ ಬೇಡುತ್ತಿದ್ದೆ. ಉಜ್ವಲ
ಭವಿಷ್ಯವನ್ನು ಹೊಂದಿದ್ದ ಶಿವಮೊಗ್ಗದ ಹುಡುಗ ಕಳೆದ ನವೆಂಬರ್ ನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ನೇಣು
ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಮೊದಲು ನಂಬಲಿಲ್ಲ. ನಿಜಾ ಎಂದು ಗೊತ್ತಾದಾಗ ಅಳುವನ್ನು
ಹತ್ತಿಕ್ಕಲಾಗಲಿಲ್ಲ. ಯಾವ ತಾಯಿ ಹೆತ್ತ ಮಗನೋ. ಬಂಧು ಅಲ್ಲ ಬಳಗ ಅಲ್ಲ. ಮುಖತ: ಒಮ್ಮೆಯೂ
ನೋಡಿಲ್ಲ. ಬರೀ ಟಿವಿ ಪ್ರೋಗ್ರಾಂನಲ್ಲಿ ನೋಡಿದ ಹುಡುಗ. ಆದರೆ, ಹೊಟ್ಟೆಯಲ್ಲಿ ಕರುಳು
ಕಿವುಚಿದಂತೆ ವಿಪರೀತ ಸಂಕಟವಾಗುತ್ತಿತ್ತು. ಇನ್ನು ಅವನ ಹೆತ್ತವರನ್ನು ಆ ದೇವರೆ ಕಾಪಾಡಬೇಕು.
ಏನೇ ಆಗಲಿ ಆದಿತ್ಯ ನೀನು ಹೀಗೆ
ಮಾಡಬಾರದಿತ್ತು. ಎಲ್ಲರೂ ನಿನ್ಮೇಲೆ ಎಷ್ಟು ಭರವಸೆ ಇಟ್ಟಿದ್ದರು. ನಂಬಿದ ಎಲ್ಲರಿಗೂ ಮೋಸ
ಮಾಡಿಬಿಟ್ಟೆಯಲ್ಲ ಆದಿತ್ಯ. ಅಪ್ಪ ಹೇಳಿದ್ರಲ್ಲಿ ಏನು ತಪ್ಪಿತ್ತು ಹೆತ್ತವರು ಯಾವಾಗಲೂ ಮಕ್ಕಳ ಒಳ್ಳೇದನ್ನೇ ಬಯಸೋದು.
ನಾನಾಗಿದ್ದರೂ ಅದನ್ನೇ ಹೇಳುತ್ತಿದ್ದೆ. ಮೊದಲು ಡಿಗ್ರಿ ಕಂಪ್ಲೀಟ್ ಮಾಡು ಮತ್ತೆ ಏನಾದ್ರೂ
ಮಾಡ್ಕೊ ಅಂತ. ಹೆತ್ತವರ ಸಂಕಟ ನಿಮ್ಗೆ ಹೇಗೆ ಗೊತ್ತಾಗ್ಬೇಕು ಸಾಯೋವರೆಗೂ ಕಣ್ಣೀರಲ್ಲಿ ಕೈ
ತೊಳೆಯೋ ತರ ಮಾಡಿಬಿಟ್ಟೆಯಲ್ಲ. ಈಗ ಏನು ಸಾಧಿಸಿದೆ. ಒಂದು ವರ್ಷ ಕಾದಿದ್ದರೆ ಡಿಗ್ರಿನೂ
ಕಂಪ್ಲೀಟ್ ಆಗುತ್ತಿತ್ತು. ಅವಕಾಶಾನೂ ಹುಡ್ಕೊಂಡು ಬರುತ್ತಿತ್ತು. ಆದರೆ ಅಲ್ಲೀವರೆಗೂ ಕಾಯೋ
ತಾಳ್ಮೆ ನಿನಗಿರಲಿಲ್ಲವಲ್ಲ.
ಇಂತಹ ಘಟನೆಯಿಂದ ಹೆತ್ತವರು, ಮಕ್ಕಳು ಏನೇ
ತಪ್ಪು ಮಾಡಿದ್ರೂ ಕೈ ಎತ್ತೋದಿರಲಿ ಜೋರು ಮಾಡೋಕೂ ಹೆದರೋ ಪರಿಸ್ಥಿತಿ ಬಂದಿದೆ ಗೊತ್ತಾ. ಏನಾದ್ರೂ
ಮಾಡ್ಕೊಳ್ಳಲಿ ಕಣ್ಮುಂದೆ ಇದ್ರೆ ಸಾಕು ಅನ್ನೋ ಸ್ಥಿತಿ ತಲುಪಿದ್ದಾರೆ. ಇರೋದು ಒಂದು ತಪ್ಪಿದ್ರೆ
ಎರಡು. ಮಾತೆತ್ತಿದ್ರೆ ಮನೆ ಬಿಟ್ಟು ಹೋಗ್ತೀನಿ ಇಲ್ಲಾ ಸೂಸೈಡ್ ಮಾಡ್ಕೋತ್ತೀನಿ ಅಂತ
ಹೆದರಿಸಿದ್ರೆ ಪಾಪ ಅವ್ರು ತಾನೇ ಏನು ಮಾಡ್ತಾರೆ.
ಮೊನ್ನೆ ಮೊನ್ನೆ ಮಂಗಳೂರಲ್ಲಿ ಒಂದು ರೇವ್
ಪಾರ್ಟಿ ಹಗರಣ ನಡೆಯಿತು. ಕೊನೆಗೆ ಬೆರಳು ತೋರಿಸಿದ್ದು ಯಾರಿಗೆ ಗೊತ್ತಾ. ಅರೆಬರೆ ಬಟ್ಟೆ
ಹಾಕ್ಕೊಂಡು ಪಾರ್ಟಿ ಮಾಡುತ್ತಿದ್ದರಲ್ಲ ಅವರ ಹೆತ್ತವರಿಗೆ. ಮೊದಲೇ ಅಪ್ಪ ಅಮ್ಮ ಹೊಡೆದಿದ್ರೆ ಈಗ
ಯಾರಿಂದಲೋ ಏಟು ತಿನ್ಬೇಕಾಗಿತ್ತಾ. ಆ ತರಹ ಬಟ್ಟೆ ಹಾಕ್ಕೊಂಡು ಬಂದಿದ್ರಲ್ಲ ಅವ್ರ ಅಪ್ಪ ಅಮ್ಮ
ಏನು ಮಾಡುತ್ತಿದ್ದರು ಅಂತ ಕಮೆಂಟ್ ಮಾಡಿದ್ದೇ ಮಾಡಿದ್ದು. ಆದರೆ ಅವರು ಅಪ್ಪಅಮ್ಮನ ಮಾತು ಕೇಳೋ
ಸ್ಥಿತೀಲಿ ಇದ್ದಾರಾ. ಅಲ್ಲಿಗೆ ಹೋದ್ಮೇಲೆ ಬಟ್ಟೆ ಚೇಂಜ್ ಮಾಡಿರಬಹುದಲ್ಲಾ. ಬುದ್ಧಿಗೆ ಏನಾದ್ರೂ
ಒಂದೇಟು ಹೊಡೆದು, ಅದಕ್ಕೇ ಅವನು ಯಾ ಅವಳು ಆತ್ಮಹತ್ಯೆ ಮಾಡ್ಕೊಂಡ್ರೆ ಅದಕ್ಕೂ ಹೆತ್ತವರನ್ನೇ ಹೊಣೆ
ಮಾಡುತ್ತಾರೆ ವಯಸ್ಸಿಗೆ ಬಂದ ಮಕ್ಕಳಿಗೆ ಯಾರಾದ್ರೂ ಹೊಡೀತಾರಾ? ಅಂತ.
ಮಕ್ಕಳೆ ಪರೀಕ್ಷೆಯಲ್ಲಿ ಫೇಲ್ ಆದ್ರೆ
ಇನ್ನೊಂದು ಸಲ ಪ್ರಯತ್ತಿಸಬಹುದಲ್ಲಾ. ಲವ್ ಫೇಲ್ಯೂರ್ ಆದ್ರೆ ಏನಂತೆ ಪ್ರಾಣಕ್ಕಿಂತ ಹೆಚ್ಚಾಗಿ
ಪ್ರೀತಿಸೋ ಅಪ್ಪ ಅಮ್ಮ ಇದ್ದಾರಲ್ಲ. ಸ್ವಲ್ಪ ದಿನ ಆದ್ಮೇಲೆ ಎಲ್ಲಾ ಮರೆಯಬಹುದಲ್ಲ. ಗಂಡ
ಪ್ರೀತಿಸದಿದ್ರೆ ಏನಂತೆ ಮಕ್ಕಳಿದ್ದಾರಲ್ಲ ಪ್ರೀತಿಸೋಕೆ. ದೇವರು ಒಂದು ಕೈಯಿಂದ ಕಿತ್ತುಕೊಂಡ್ರೆ
ಇನ್ನೊಂದು ಕೈಯಿಂದ ನೀಡುತ್ತಾನಂತೆ. ಒಂದು ಬಾಗಿಲು ಮುಚ್ಚಿದ್ರೆ ಇನ್ನೊಂದು ಬಾಗಿಲು
ತೆರೆದಿರುತ್ತಂತೆ. ಭಗವದ್ಗೀತೆ ಹೇಳುವಂತೆ ಜೀವನದಲ್ಲಿ ಏನಾಗಬೇಕು ಎಲ್ಲವೂ ಮೊದಲೇ
ನಿರ್ಣಯವಾಗಿರುತ್ತದೆ. ನಾವು ನಿಮಿತ್ತ ಮಾತ್ರ. ಆತ್ಮಹತ್ಯೆ ಮಾಡಿಕೊಂಡ್ರೆ ಕರ್ಮ ಎಲ್ಲಾ ಮುಗೀತು ಬಿಡುಗಡೆ
ಸಿಕ್ತು ಅಂತ ತಿಳ್ಕೊಳ್ಳೋದು ತಪ್ಪು. ಪ್ರಸ್ತುತ ದೇಹದಿಂದ ಬೇರೆಯಾಗಿರಬಹುದು ಅಷ್ಟೆ. ಆತ್ಮಹತ್ಯೆ
ಮಾಡಿಕೊಂಡ ಪಾಪವನ್ನೂ ಸೇರಿಸಿ ಹಿಂದಿನ ಪ್ರಾರಬ್ಧವನ್ನು ಅನುಭವಿಸುವಂತೆ ಇನ್ನೊಂದು ನೀಚ ಜನ್ಮವನ್ನು
ನೀಡುತ್ತಾನೆ ಭಗವಂತ. ಆದರೆ, ಮಾನವ ಜನ್ಮ ಮಾತ್ರ ಖಂಡಿತಾ ನೀಡೋದಿಲ್ಲ. ಅದಕ್ಕೇ ದಾಸರು ಹೇಳಿರೋದು
ಮಾನವ ಜನ್ಮ ದೊಡ್ಡದು ಹಾಳು ಮಾಡದಿರಿ ಹುಚ್ಚಪ್ಪಗಳಿರಾ ಅಂತ.
ಇಲ್ಲಿ ನನಗೆ ಸ್ವಾಮಿ ಸುಖಬೋಧಾನಂದಜೀ
ಅವರು ಹೇಳಿದ ಒಂದು ಘಟನೆ ನೆನಪಾಗುತ್ತದೆ. ಖ್ಯಾತ ವಿಂಬಲ್ಡನ್ ಆಟಗಾರನಿಗೆ ಏಡ್ಸ್ ರೋಗ ಬಂದು
ಅದರಿಂದಲೇ ಆತ ತೀರಿಕೊಂಡ. ಅವನ ಅನಾರೋಗ್ಯದ ಪರಿಸ್ಥಿತಿಯಲ್ಲಿ ಒಬ್ಬ ಕೇಳಿದ, ನನಗೇ ಯಾಕೆ ಹೀಗಾಯಿತು
ಅಂತ ನಿನಗೆ ಅನಿಸುವುದಿಲ್ಲವೆ? ಅವನು ಹೀಗೆ ಉತ್ತರಿಸಿದ. ಈ ಪ್ರಪಂಚದಲ್ಲಿ ಬಿಲಿಯಗಟ್ಟಳೆ
ಜನರಿದ್ದಾರೆ. ಅವರ ಪೈಕಿ ಕೆಲವು ಮಿಲಿಯ ಜನರಿಗಷ್ಟೇ ಟೆನ್ನಿಸ್ ಗೊತ್ತು. ಅಂತಹವರ ಪೈಕಿ 10
ಸಾವಿರ ಮಂದಿ ವೃತ್ತಿಪರ ಆಟಗಾರರಾಗುತ್ತಾರೆ. ಅವರಲ್ಲಿ ಒಂದು ಸಾವಿರ ಮಂದಿ ಅಂತರಾಷ್ಟ್ರೀಯ
ಮಟ್ಟಕ್ಕೆ ಬರುತ್ತಾರೆ. ಅವರ ಪೈಕಿ 30 ಮಂದಿ ವಿಂಬಲ್ಡನ್ ಆಯ್ಕೆಯಾಗುತ್ತಾರೆ. ಅವರಲ್ಲಿ 8 ಮಂದಿ
ಸೆಮಿಫೈನಲ್ ತಲುಪುತ್ತಾರೆ. ಆ 8 ಮಂದಿಯಲ್ಲಿ ಇಬ್ಬರಷ್ಟೇ ಫೈನಲ್ ಗೆ ಬರುತ್ತಾರೆ. ಅಂತಹ
ಇಬ್ಬರಲ್ಲಿ ನಾನು ಒಬ್ಬ ಆಗಿದ್ದೆ ಹಾಗೂ ನಾನೇ ಗೆದ್ದೆ. ಆಗ ನಾನು ಭಗವಂತನಲ್ಲಿ ನನಗೆ ಏಕೆ
ಹೀಗಾಯಿತು ಅಂತ ಕೇಳಲಿಲ್ಲ. ಈಗಲೂ ಕೇಳುವುದಿಲ್ಲ. ಆದ್ದರಿಂದ ಜೀವನದಲ್ಲಿ ಬಂದದ್ದನ್ನು ಬಂದ ಹಾಗೇ
ಸ್ವೀಕರಿಸೋದನ್ನ ರೂಢಿ ಮಾಡಿಕೊಳ್ಳೋಣ.
*****
No comments:
Post a Comment