Sunday, 2 February 2014

ಅಪ್ಪುಗೆ


ಕೆಲವು ಧರ್ಮೀಯರಲ್ಲಿ ಆತ್ಮೀಯರು, ಗೆಳೆಯರು, ಸಂಬಂಧಿಕರು ಎದುರಾದಾಗ ಅವರನ್ನು ಅಪ್ಪಿಕೊಳ್ಳುವ ಮೂಲಕ ಎದುರುಗೊಳ್ಳುತ್ತಾರೆ. ವಿದಾಯ ಸಂದರ್ಭಗಳಲ್ಲೂ ಅಪ್ಪಿಕೊಂಡು ಬೀಳ್ಕೊಡುತ್ತಾರೆ. ಹಬ್ಬ ಹರಿದಿನಗಳಲ್ಲೂ ಒಬ್ಬರಿಗೊಬ್ಬರು ಅಪ್ಪಿಕೊಂಡು ಶುಭಾಷಯ ವಿನಿಯೋಗಿಸಿಕೊಳ್ಳುತ್ತಾರೆ. ಆದರೆ, ಹಿಂದೂ ಸಂಪ್ರದಾಯದಲ್ಲಿ ಇದು ಅಪರೂಪ. ಕೈಗಳನ್ನು ಜೋಡಿಸಿ ನಮಸ್ಕರಿಸುವ ಅಥವಾ ಬಗ್ಗಿ ಕಾಲಿಗೆ ನಮಸ್ಕರಿಸುವ ಮೂಲಕ ಗೌರವ ತೋರಿಸಲಾಗುತ್ತದೆ. ಅಪ್ಪಿಕೊಂಡು ಭಾವನೆಗಳನ್ನು ವ್ಯಕ್ತಪಡಿಸೋದು ತಪ್ಪೇನಲ್ಲ. ಕೆಲವೊಮ್ಮೆ ಮಾತಿನಲ್ಲಿ ವ್ಯಕ್ತಪಡಿಸಲಾಗದ ಭಾವನೆಗಳು ಅಪ್ಪುಗೆ ಮೂಲಕ ಹೊರಹೊಮ್ಮುತ್ತವೆ.

ನನ್ನ ಮಗನ ನಾಮಕರಣಕ್ಕೆಂದು ಅಮ್ಮ ಊರಿನಿಂದ ಬಂದಿದ್ದರು. ಅವರ ಆರೋಗ್ಯ ಹದಗೆಟ್ಟಿತ್ತು. ಆದರೂ ಮೊಮ್ಮಗನನ್ನು ನೋಡಲೇ ಬೇಕು ಎಂದು ಅಣ್ಣನನ್ನು ಜೊತೆಗೂಡಿಸಿಕೊಂಡು ಬೆಂಗಳೂರಿಗೆ ಬಂದಿದ್ದರು. ನಾಮಕರಣ ಮುಗಿಸಿ ವಾಪಸ್ಸು ಊರಿಗೆ ಹೊರಟು ನಿಂತಾಗ ನನ್ನನ್ನು ಜೋರಾಗಿ ಅಪ್ಪಿಕೊಂಡರು. ಎಷ್ಟು ಹೊತ್ತಿನವರೆಗೂ ಅಪ್ಪುಗೆಯಿಂದ ಬಿಡಿಸಿಕೊಳ್ಳಬೇಕು ಅಂತ ಇಬ್ಬರಿಗೂ ಅನಿಸಲೇ ಇಲ್ಲ. ಇಬ್ಬರ ಕಣ್ಣಲ್ಲೂ ನೀರು. ಹೇಳಿಕೊಳ್ಳಲಾಗದ ಅದೆಷ್ಟು ಭಾವನೆಗಳು ಆ ಅಪ್ಪುಗೆಯಲ್ಲಿದ್ದವು. ಆದರೆ ಅದೇ ಕೊನೆಯ ಅಪ್ಪುಗೆಯಾಗಬಹುದು ಅಂತ ನಾನು ಅಂದುಕೊಂಡಿರಲಿಲ್ಲ. ಬಹುಷ: ಅಮ್ಮನಿಗೆ ಮೊದಲೇ ಸೂಚನೆ ಇದ್ದಿರಬಹುದಾ. ಮಗನಿಗೆ 5 ತಿಂಗಳಾಗುವಾಗ ಅಮ್ಮ ದೈವಾಧೀನರಾಗಿದ್ದರು. ಆವಾಗ ಮೊಬೈಲ್ ಇರಲಿಲ್ಲ. ಮನೆಯಲ್ಲಿ ದೂರವಾಣಿ ಕೂಡಾ ಇರಲಿಲ್ಲ. ಯಜಮಾನರ ಆಫೀಸಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದರು. ಆಗಲೇ ತಡವಾಗಿ ಬಿಟ್ಟಿತ್ತು. ನಾವು ಹೋಗುವಾಗ ಎಲ್ಲಾ ಮುಗಿದಿತ್ತು. ಕೊನೆಗೊಮ್ಮೆ ಅಮ್ಮನ ಮುಖ ನೋಡುವ ಭಾಗ್ಯ ಕೂಡಾ ನನಗೆ ಸಿಗಲಿಲ್ಲ. ಆದರೆ, ಅವರ ಆ ಕೊನೆಯ ಅಪ್ಪುಗೆ ಮಾತ್ರ ನಿಶ್ಚಲವಾಗಿ ನನ್ನ ಮನಸ್ಸಲ್ಲಿ ಬೇರೂರಿದೆ.

ಮಗಳ ಮದುವೆಯ ಸಂದರ್ಭ. ಹೆಣ್ಣಿಳಿಸಿ ಕೊಡುವ ಶಾಸ್ತ್ರ ಕೂಡಾ ಮುಗಿದು ಕೊನೆಯಲ್ಲಿ ಮಗಳು ಹೋಗಿ ಬರುತ್ತೇನೆ ಅಮ್ಮಾ ಅನ್ನುತ್ತಾ ಕಾಲಿಗೆ ನಮಸ್ಕಾರ ಮಾಡಲು ಬಗ್ಗಿದವಳು ಎಷ್ಟು ಹೊತ್ತಾದರೂ ಮೇಲೇ ಏಳಲೇ ಇಲ್ಲ. ಅವಳು ತನ್ನ ಕಣ್ಣೀರಿನಿಂದ ನನ್ನ ಪಾದಗಳನ್ನು ತೋಯಿಸುತ್ತಿದ್ದಳು. ಕೊನೆಗೆ ನಾನೇ ಅವಳ ಎರಡೂ ತೋಳುಗಳನ್ನು ಮೇಲೆತ್ತಿ ತಬ್ಬಿಕೊಂಡೆ. ಆ ಅಪ್ಪುಗೆಯಲ್ಲಿ ಅಡಗಿದ್ದ ಭಾವನೆಗಳನ್ನು ವಿವರಿಸೋದು ಅಸಾಧ್ಯ. ಅವಳ ಕಣ್ಣೊರಸಿ ಬೀಳ್ಕೊಟ್ಟಿದ್ದೆ. ಆದರೆ ಆ ಅಪ್ಪುಗೆಯನ್ನು ಮರೆಯೋದು ಸಾಧ್ಯಾನೇ ಇಲ್ಲ.

ಅಮ್ಮಾ ತಲೆಗೆ ಸ್ನಾನ ಮಾಡಲಾ ಮೈಗೆ ಮಾಡಲಾ ಅಂತ ಈಗಲೂ ಕೇಳುತ್ತಿದ್ದ ಆಳೆತ್ತರ ಬೆಳೆದು ನಿಂತಿದ್ದ ಮಗ ಅಂದು ಕೆಲಸದ ನಿಮಿತ್ತ ದುಬೈಗೆ ಹೊರಟು ನಿಂತಿದ್ದ. ಎಲ್ಲಕ್ಕೂ ಅಪ್ಪ ಅಮ್ಮನನ್ನು ಅವಲಂಬಿಸುತ್ತಿದ್ದ ಇವನು ಅಲ್ಲಿ ಹೇಗೆ ನಿಬಾಯಿಸುತ್ತಾನೆ ಅನ್ನುವ ಚಿಂತೆ ಅಮ್ಮನಿಗೆ. ಅವನು ಅಮ್ಮನನ್ನು ಬಿಟ್ಟು ಯಾವತ್ತೂ ಇರಲಿಲ್ಲ. ಒಳಗೊಳಗೆ ದು:ಖ ಉಮ್ಮಳಿಸಿ ಬರುತ್ತಿತ್ತು. ಓಡಿ ಬಂದವನೇ ಅಮ್ಮನನ್ನು ಅಪ್ಪಿಕೊಂಡುಬಿಟ್ಟ. ಆ ಅಪ್ಪುಗೆಯಲ್ಲಿ ಹೇಳಿಕೊಳ್ಳಲಾರದ ಅದೆಷ್ಟು ಭಾವನೆಗಳು, ಅಗಲಿಕೆಯ ನೋವು ತುಂಬಿತ್ತು. ಅದರ ನಂತರ ಅನೇಕ ಸಲ ಬಂದು ಹೋಗಿದ್ದಾನೆ. ಆದರೆ, ಮೊದಲ ಸಲ ದುಬೈಗೆ ಹೊರಟು ನಿಂತಾಗಿನ ಆ ಅಪ್ಪುಗೆ ಮರೆಯಲಸಾದ್ಯ.

ಅಂದು ಅವಳ ಪ್ರಾಣ ಸ್ನೇಹಿತೆ ನಿವೃತ್ತಿ ಹೊಂದುವವಳಿದ್ದಳು. ಅನಾರೋಗ್ಯದ ನಿಮಿತ್ತ ಅವಳು ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದಳು. ಬೀಳ್ಕೊಡುಗೆ ಸಮಾರಂಭ ಮುಗಿದ ನಂತರ ಅವಳು ಸ್ನೇಹಿತೆಯನ್ನು ಬಿಗಿಯಾಗಿ ಅಪ್ಪಿಕೊಂಡಳು. ಕಣ್ಣಲ್ಲಿ ನೀರು ತುಂಬಿಕೊಂಡಿತ್ತು. ಆ ಆಲಿಂಗನದಲ್ಲಿ ಅವರ ಅಷ್ಟು ದಿನಗಳ ಸ್ನೇಹ, ಒಡನಾಟ, ಅಗಲಿಕೆಯ ನೋವು ಎಲ್ಲಾ ತುಂಬಿತ್ತು.

ಎಷ್ಟೋ ಸಮಯದ ನಂತರ ಅಕ್ಕ ತಂಗಿಯ ಮನೆಗೆ ಬಂದಿದ್ದಳು. ದೂರದ ಮುಂಬೈನಲ್ಲಿದ್ದುದರಿಂದ ಆಗಾಗ್ಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ತಂಗಿಯ ಮಗಳ ಸೀಮಂತಕ್ಕೆಂದು ಬಂದವಳು ಮನೆ ಮಠ ಊರು ಎಲ್ಲಾ ಮರೆತು ಸಂತೋಷವಾಗಿ ಸ್ವಲ್ಪ ದಿನ ತಂಗಿಯ ಮನೆಯಲ್ಲಿ ತಂಗಿದ್ದಳು. ಹೊರಟು ನಿಂತಾಗ ಕಣ್ಣಲ್ಲಿ ನೀರು. ಭಾವುಕಳಾಗಿ ಅವಳಿಗೆ ಅರಿವಿಲ್ಲದೇ ತಂಗಿಯನ್ನು ಅಪ್ಪಿಕೊಂಡಿದ್ದಳು. ಎಷ್ಟು ಹೊತ್ತಾದರೂ ಆ ಬೆಸುಗೆ ಬೇರ್ಪಡಲೇ ಇಲ್ಲ. ಆ ಅಪ್ಪುಗೆಯಲ್ಲಿನ ಭಾವನೆಗಳನ್ನು ಪದಗಳಿಂದ ವರ್ಣಿಸೋದು ಅಸಾಧ್ಯ.

ಆತ್ಮೀಯರೊಬ್ಬರನ್ನು ಚಿಕಿತ್ಸೆಗೆಂದು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದರು. ಅವರನ್ನು ನೋಡಲೆಂದು ಆಸ್ಪತ್ರೆಗೆ ಹೋಗಿದ್ದೆ. ಅವರು ಎದ್ದು ಕುಳಿತವರೇ ನನ್ನನ್ನು ಬಿಗಿಯಾಗಿ ತಬ್ಬಿಕೊಂಡು ಅಳತೊಡಗಿದರು. ನಾನು ತುಂಬಾ ಚಿಕ್ಕವಳು. ಆದರೂ ನನ್ನಲ್ಲಿ ಅವರು ಈ ರೀತಿ ನಡೆದುಕೊಳ್ಳಬೇಕಾದರೆ  ಅದು ಅವರು ನನ್ನಲ್ಲಿಟ್ಟಿರುವ ಆತ್ಮೀಯತೆ ಹಾಗೂ ನಂಬಿಕೆ. ಎಲ್ಲರ ಜೊತೆ ಈ ರೀತಿ ನಡೆದುಕೊಳ್ಳೋದು ಸಾಧ್ಯವಿಲ್ಲ. ಏನೂ ಆಗೋದಿಲ್ಲ. ಬೇಗ ಹುಷಾರಾಗಿ ಊರಿಗೆ ಹೋಗುತ್ತೀರಾ ಅಂತ ಸಮಾಧಾನದ ಮಾತಾಡಿದೆ. ಅಂದೇ ಅವರಿಗೆ ಆಪರೇಷನ್ ಇತ್ತು. ಆಪರೇಷನ್ ಮಾಡಿದ್ದಾಗ್ಯೂ ಅವರು ಉಳಿಯಲಿಲ್ಲ. ಅವರ ಆ ಅಪ್ಪುಗೆ ಪದೇ ಪದೇ ನೆನಪಾಗುತ್ತದೆ.

ಅದೊಂದು ಸುಂದರ ಚಿಕ್ಕ ಸಂಸಾರ. ಮಗಳಿಗೆ ಮದುವೆಯಾಗಿತ್ತು. ಮಗನಿಗೂ ಒಳ್ಳೆಯ ಕಡೆಯ ಸಂಬಂಧ ಬಂದುದರಿಂದ ಅವನಿಗೂ ಮದುವೆ ಮಾಡಿ ಮುಗಿಸಿದರು. ಅವರ ಸುಂದರ ಸಂಸಾರದ ಮೇಲೆ ದುಷ್ಟಶಕ್ತಿಯ ದೃಷ್ಟಿ ಬಿದ್ದಿರಬೇಕು. ಮಗನ ಮದುವೆಯಾಗಿ 6 ತಿಂಗಳಿಗೆ ಮನೆಯ ಯಜಮಾನನಿಗೆ ಹಠಾತ್ ಆಗಿ ಹಾರ್ಟ್ ಅಟ್ಯಾಕ್ ಆಗಿ ಸಾವು ಬಂದೊದಗಿತ್ತು. ಇದರಿಂದ ಆಘಾತಗೊಂದ ಅಣ್ಣ ತಂಗಿ ಇಬ್ಬರೂ ಎಚ್ಚರ ತಪ್ಪಿದವರಂತೆ ಒಬ್ಬರಿಗೊಬ್ಬರು ಅಪ್ಪಿಕೊಂಡು ಅಳುತ್ತಿದ್ದರು. ಆ ಅಪ್ಪುಗೆಯಲ್ಲಿನ ಭಾವನೆಗಳು ವರ್ಣನಾತೀತ.

ನಿಮಗೆ ತುಂಬಾ ದು:ಖವಾದಾಗಲಾಗಲೀ, ತುಂಬಾ ಸಂತೋಷವಾದಾಗಲಾಗಲೀ ಅದಕ್ಕೆ ಕಾರಣರಾದವರೊಂದಿಗೆ ಅಥವಾ ಹೃದಯಕ್ಕೆ ತುಂಬಾ ಹತ್ತಿರವಾದವರೊಂದಿಗೆ ಒಂದು ಅಪ್ಪುಗೆ ಮೂಲಕ ಅದನ್ನು ಹಂಚಿಕೊಳ್ಳಿ. ಒಂದು ಕ್ಷಣ ಇಹದ ಇರವನ್ನು ಮರೆಯೋದಂತೂ ನಿಜ..
*****

Thursday, 16 January 2014

ಅತ್ತೆಗೊಂದು ಕಾಲ...


ಅವಳು ಇಂದು ಸ್ವತಂತ್ರವಾಗಿ ಅತ್ತ ಇತ್ತ ಅಲುಗಾಡುವ ಸ್ಥಿತಿಯಲ್ಲಿ ಕೂಡಾ ಇರಲಿಲ್ಲ. ಅವಳಿಗೆ ಲಕ್ವ ಹೊಡೆದು ಮಲಗಿದ್ದಲ್ಲಿಯೇ ಇರುವಂತಾಗಿತ್ತು. ಒಂದು ಲೋಟ ನೀರು ಬೇಕಾದರೂ ಬೇರೆಯವರನ್ನು ಆಶ್ರಯಿಸಬೇಕಿತ್ತು.  ನಿಂತು ಹೋಗಿದ್ದ ಫ್ಯಾನ್ ನ್ನು ಕಾಂತಿಹೀನ ಕಣ್ಣನಿಂದ ನೋಡುತ್ತಾ ಅವಳು ಗತ ಜೀವನವನ್ನು ನೆನಪಿಸತೊಡಗಿದಳು. ಅದೊಂದು ಬಿಟ್ರೆ ಬೇರೆ ಏನೂ ಮಾಡುವ ಸ್ಥಿತಿಯಲ್ಲಿ ಅವಳಿರಲಿಲ್ಲ.

ಮಗ ತಾನು ಇಷ್ಟಪಟ್ಟ ಹುಡುಗಿಯನ್ನು ಮದುವೆಯಾಗಿ ಮನೆಗೆ ಕರಕೊಂಡು ಬಂದಿದ್ದ. ಪರಜಾತಿ ಹುಡುಗಿ ಎಂದು ಸೊಸೆಯನ್ನು ಅದೆಷ್ಟು ಗೋಳು ಹೊಯ್ದುಕೊಂಡಿದ್ದಳು. ಅವಳು ಏನು ಮಾಡಿದರೂ ತಪ್ಪು. ಮೊಸರಲ್ಲೂ ಕಲ್ಲು ಹುಡುಕುತ್ತಿದ್ದಳು. ಕೊನೆಗೆ ಮಗ ಸೊಸೆ ಜೊತೆಯಲ್ಲಿದ್ದರೆ ಸೊಸೆ ಮಗನ ಮನಸ್ಸು ಕೆಡಿಸಿ ತನ್ನನ್ನು ಮೂಲೆಗುಂಪು ಮಾಡಬಹುದು ಅಂತ ಅವರಿಬ್ಬರನ್ನು ಜೊತೆಯಲ್ಲಿರಲು ಸಹಾ ಬಿಡುತ್ತಿರಲಿಲ್ಲ. ಮಗ ರೂಮಿಗೆ ಮಲಗಲು ಹೊರಟ ತಕ್ಷಣ ಮಗಾ, ತುಂಬಾ ತಲೆ ನೋಯ್ತಾ ಇದೆ ಅಂತಲೋ ಹೊಟ್ಟೆ ನೋವು ಅಂತಲೋ ಏನಾದ್ರೂ ಒಂದು ನೆಪ ತೆಗೆದು ಅವನನ್ನು ತನ್ನ ಹತ್ತಿರವೇ ಇರಿಸಿಕೊಳ್ಳುತ್ತಿದ್ದಳು. ಅವನು ಅಮ್ಮನಿಗೆ ಇಷ್ಟವಿಲ್ಲದ ಸೊಸೆಯನ್ನು ತಂದು ಅಮ್ಮನ ಮನಸ್ಸು ನೋಯಿಸಿದ್ದೇನೆ ಇನ್ನೆಂದೂ ಅಮ್ಮನ ಮನಸ್ಸಿಗೆ ನೋವುಂಟು ಮಾಡಬಾರದು ಅಂತ ಅಮ್ಮನ ಮಾತನ್ನು ಎಂದೂ ಮೀರುತ್ತಿರಲಿಲ್ಲ. ಸೊಸೆ ಮಾತ್ರ ಈ ಸಂಪತ್ತಿಗೆ ಮದುವೆ ಯಾಕೆ ಮಾಡ್ಕೋಬೇಕಾಗಿತ್ತು ಅಂತ ಒಳಗೊಳಗೆ ಕೊರಗುತ್ತಿದ್ದಳು. ಸೊಸೆ ಕೊರಗೋದನ್ನು ನೋಡಿ ಅವಳು ಖುಷಿಪಡುತ್ತಿದ್ದಳು.

ಒಂದು ದಿನ ಅತ್ತೆ ಸೊಸೆಗೆ ಜಗಳ ಹತ್ತಿಕೊಳ್ತು. ಸೊಸೆಗೂ ರೋಸಿ ಹೋಗಿತ್ತು. ಮಾತಿಗೆ ಮಾತು ಕೊಡಲಾರಂಭಿಸಿದಳು. ಮಗ ಬಂದವನೇ, ಅಮ್ಮನಿಗೇ ಎದುರು ವಾದಿಸುತ್ತೀಯಾ ಅಂತ ಕೆನ್ನೆಗೆ ರಪ್ ಅಂತ ಬಾರಿಸಿದ. ಅವಳು ಇದನ್ನ ನಿರೀಕ್ಷಿಸಿರಲಿಲ್ಲ. ರೂಮಿಗೆ ಹೋದವಳೇ ಬಾಗಿಲು ಹಾಕಿಕೊಂಡು ಫ್ಯಾನಿಗೆ ನೇಣು ಹಾಕಿಕೊಂಡಳು.

ಸೊಸೆ ಸತ್ತು ವರ್ಷವಾಗುವುದರೊಳಗೆ ಮಗನಿಗೆ ತನ್ನ ಸಂಬಂಧಿಕರ ಹುಡುಗಿಯೊಬ್ಬಳನ್ನು ತಂದು ಮನೆ ತುಂಬಿಸಿಕೊಂಡಳು. ಹೊಸ ಸೊಸೆ ಮೊದಮೊದಲು ಅತ್ತೆಯನ್ನು ಚೆನ್ನಾಗಿಯೇ ನೋಡಿಕೊಂಡಳು. ಯಾವಾಗ ಅತ್ತೆಗೆ ಲಕ್ವ ಹೊಡೆದು ಮಲಗಿದ್ದಲ್ಲಿಯೇ ಆದಳು ಅಂದಿನಿಂದ ಅವಳ ವರಸೆ ಬದಲಾಗತೊಡಗಿತು. ಎಂತೆಂತವರೋ ಸಾಯ್ತಾರೆ ಈ ಹಾಳು ಮುದುಕಿಗೆ ಮಾತ್ರ ಸಾವು ಬರಲ್ಲ. ನನಗೆ ಯಾವ ಕರ್ಮ ಇದರ ಹೇಲು ಉಚ್ಚೆ ಬಾಚೋದು. ಯಾವಾಗ ಸಾಯುತ್ತೋ ಇದು ಅಂತ ಅವಳಿಗೆ ಕೇಳಿಸುವಂತೆ ವಟಗುಟ್ಟುತ್ತಿದ್ದಳು. ಹೇಲು ಉಚ್ಚೆ ಬಾಚಬೇಕಾಗುತ್ತದೆಂದು ಹೊಟ್ಟೆಗೂ ಕೊಡುತ್ತಿರಲಿಲ್ಲ. ಅವಳು ಹಸಿವೆಯಿಂದ ಒದ್ದಾಡುತ್ತಿದ್ದಳು.

ಅವಳು ಮೊದಲ ಸೊಸೆಯನ್ನು ನೆನಪಿಸಿಕೊಳ್ಳುತ್ತಾ, ನಿನಗೆ ಕೊಡಬಾರದ ಕಷ್ಟ ಕೊಟ್ಟೆ ಕಣೆ. ದೇವರು ಸರಿಯಾದ ಶಿಕ್ಷೆ ಕೊಟ್ಟ. ನೀನೇ ಪುಣ್ಯವಂತೆ. ಯಾಕೇಂದ್ರೆ ಕಷ್ಟವನ್ನು ಸಹಿಸಲಾಗದೆ ನೇಣು ಹಾಕಿಕೊಳ್ಳುವ ಸ್ವಾತಂತ್ಯ್ರನಾದ್ರೂ ನಿನಗಿತ್ತು. ನನ್ನ ಅವಸ್ಥೆ ನೋಡು ಸಾಯೋಣಾ ಅಂದ್ರೆ ನೇಣು ಹಾಕಿಕೊಳ್ಳಲೂ ಆಗ್ತಾ ಇಲ್ಲ. ಹೊಟ್ಟೇಗೂ ಇಲ್ಲದೆ ದಿನಾ ಸಾಯುತ್ತಿದ್ದೇನೆ ಕಣೆ. ನನ್ನಿಂದ ತಪ್ಪಾಯ್ತು. ನನ್ನನ್ನೂ ನಿನ್ನ ಹತ್ತಿರ ಕರೆಸ್ಕೋ. ಈ ನರಕದಿಂದ ನನ್ನನ್ನು ಪಾರು ಮಾಡು ಪ್ಲೀಸ್.
*****

Saturday, 21 December 2013

ಕೃಷ್ಣ ಕೃಷ್ಣ


ಅದೊಂದು ಆಶ್ರಮ. ಅಲ್ಲಿ ಗಂಡಸರು ಹೆಂಗಸರು, ಹದಿಹರೆಯದವರು ಮಧ್ಯ ವಯಸ್ಸಿನವರು ವಯಸ್ಸಾದವರು ಹೀಗೆ ಎಲ್ಲ ಜಾಯಮಾನದವರೂ ಇದ್ದರು. ಗಂಡಸರು ಎದುರಾದಲ್ಲಿ ‘ಕೃಷ್ಣ ಕೃಷ್ಣ’ ಅನ್ನುತ್ತಿದ್ದರು. ಹೆಂಗಸರಾದಲ್ಲಿ ‘ರಾಧೆ ರಾಧೆ’ ಅನ್ನುತ್ತಿದ್ದರು. ಹೆಸರು ಹಿಡಿದು ಯಾರೂ ಕೂಗುತ್ತಿರಲಿಲ್ಲ. ಕಡ್ಡಾಯವೆಂಬಂತೆ ಎಲ್ಲರ ಕೈಯಲ್ಲೂ ಜಪಮಾಲೆ ಇದ್ದೇ ಇರುತ್ತಿತ್ತು.

ಅಪ್ಪ ಅಮ್ಮನಿಗೆ ಅವಳು ಒಬ್ಬಳೇ ಮಗಳು. ಅತಿ ಮುದ್ದಿನಿಂದ ಸಾಕಿದ್ದರು. ಅವಳಿಗೆ ಚಿಕ್ಕಂದಿನಿಂದಲೇ ದೇವರ ಬಗ್ಗೆ ಅತೀ ಆಸಕ್ತಿ.  ದಿನಗಳೆದಂತೆ ಅದು ಜಾಸ್ತಿಯಾಗತೊಡಗಿತು. ಊಟ ತಿಂಡಿ ಬಿಟ್ಟು ಉಪವಾಸ ಮಾಡುತ್ತಿದ್ದಳು. ಇಡೀ ದಿನ ನಿರಾಹಾರ ಇರುತ್ತಿದ್ದಳು. ದೇವಸ್ಥಾನಕ್ಕೆ ತಪ್ಪದೆ ಹೋಗುತ್ತಿದ್ದಳು. ಆಧ್ಯಾತ್ಮದ ಬಗ್ಗೆ ಎಲ್ಲಿ ಯಾವುದೇ ಕಾರ್ಯಕ್ರಮವಿದ್ದರೂ ಹಾಜರಿರುತ್ತಿದ್ದಳು. ಅವಳು ಆಶ್ರಮದ ಸ್ವಾಮೀಜಿಯವರಿಂದ ಪ್ರೇರೇಪಿತಳಾಗಿದ್ದಳು. ಸ್ವಾಮೀಜಿಯವರ ಒಂದು ಪ್ರವಚನವನ್ನೂ ಮಿಸ್ ಮಾಡುತ್ತಿರಲಿಲ್ಲ. ದೇವರಿಗೆ ನೈವೇದ್ಯ ಮಾಡದೆ ತಾನು ತಿನ್ನುತ್ತಿರಲಿಲ್ಲ. ದೇವರಿಗೆ ನೈವೇದ್ಯ ಮಾಡದೆ ತಿಂದಲ್ಲಿ ಅದು ಮಣ್ಣು ತಿಂದ ಹಾಗೆ ಅನ್ನುತ್ತಿದ್ದಳು. ಅವಳಿಗೆ ಬೇಜಾರಾಗಬಾರದೆಂದು ಏನೇ ಅಡುಗೆ ಮಾಡಿದರೂ ಮೊದಲು ಸ್ವಲ್ಪ ದೇವರಿಗೆ ಎತ್ತಿಟ್ಟು ಆಮೇಲೆ ಮನೆಮಂದಿ ಎಲ್ಲಾ ತಿನ್ನುತ್ತಿದ್ದೆವು.

ಮನೆಯಲ್ಲಿ ಇದ್ದರೆ ಶ್ರದ್ಧೆ ಭಕ್ತಿಯಿಂದ ದೇವರ ಧ್ಯಾನ ಮಾಡಲಾಗುತ್ತಿಲ್ಲ. ಆಶ್ರಮದಲ್ಲಿಯೇ ಇದ್ದರೆ ಯಾವುದೇ ಅಡ್ಡಿ ಆತಂಕಗಳಿಲ್ಲದೆ 24 ಗಂಟೆಯೂ ಭಗವಂತನ ಸೇವೆ ಮಾಡಬಹುದು ಎಂದು ನಿರ್ಧರಿಸಿ ಒಂದು ದಿನ ಅಪ್ಪ ಅಮ್ಮ ಎಷ್ಟು ಹೇಳಿದರೂ ಕೇಳದೆ ಆಶ್ರಮದಲ್ಲಿರಲು ನಿರ್ಧರಿಸಿ ಹೋಗಿಯೇ ಬಿಟ್ಟಳು. ಮನೆಯಲ್ಲಿಯೇ ಪೂಜೆ ಮಾಡಲು ನಿನಗೆ ಎಲ್ಲಾ ವ್ಯವಸ್ಥೆ ಮಾಡಿಕೊಡುತ್ತೇವೆ  ಎಂದು ಎಷ್ಟು ಗೋಗರೆದರೂ ಕೇಳಲಿಲ್ಲ. ಅಪ್ಪ ಅಮ್ಮ ಆಶ್ರಮಕ್ಕೆ ತೆರಳಿ ಸ್ವಾಮೀಜಿಯವರ ಕಾಲು ಹಿಡಿದು ಮಗಳನ್ನು ವಾಪಸ್ಸು ಮನೆಗೆ ಬರುವಂತೆ ಮಾಡಿ ಎಂದು ಕಣ್ಣೀರಿಟ್ಟರು. ‘’ಕೃಷ್ಣ ಕೃಷ್ಣ, ಎಲ್ಲಾ ಅವನಿಚ್ಛೆ. ಅವನ ಆಣತಿಯಂತೆ ನಾವು ನಡೆಯಲೇ ಬೇಕು. ನಾನೂ ಬುದ್ಧಿ ಹೇಳುತ್ತೇನೆ. ಆದರೆ ಕೇಳುವ ಸ್ಥಿತಿಯಲ್ಲಿ ಈಗ ಅವಳಿಲ್ಲ. ಅವನಿಚ್ಛೆ ಇದ್ದಲ್ಲಿ ಸ್ವಲ್ಪ ಸಮಯದ ನಂತರ ಅವಳೇ ಬರುತ್ತಾಳೆ’’ ಅಂತ ಹೇಳಿ ಕಳುಹಿಸಿಬಿಟ್ಟರು.

ಅಂದು ಅವಳ ಮದುವೆ. ಅವನು ಆಶ್ರಮದಲ್ಲಿಯೇ ಇರುವ ಇನ್ನೊಬ್ಬ ಭಕ್ತ. ಅವಳನ್ನು ಮದುವೆಯಾಗುವುದಾಗಿ ಸ್ವಾಮೀಜಿಯವರಲ್ಲಿ ತನ್ನ ಆಸೆ ವ್ಯಕ್ತಪಡಿಸಿದ್ದ. ಅವರಿಗೂ ಸರಿ ಅನ್ನಿಸಿತ್ತು. ಅವಳಿಗೆ ತಿಳಿ ಹೇಳಿ ಒಪ್ಪಿಸಿದ್ದರು. ಅವನಿಗೆ ಹಿಂದು ಮುಂದು ಯಾರೂ ಇರಲಿಲ್ಲ. ಸ್ವಾಮೀಜಿ ಅವಳ ಅಪ್ಪ ಅಮ್ಮನನ್ನು ಕರೆಸಿ ಎಲ್ಲಾ ವಿಷಯವನ್ನು ತಿಳಿಸಿದರು. ಅವರಿಗೂ ಬೇರೆ ಆಯ್ಕೆ ಇರಲಿಲ್ಲ. ಸಧ್ಯ ಮದುವೆ ಮಾಡಿಕೊಳ್ಳಲಾದರೂ ಒಪ್ಪಿದಳಲ್ಲ ಎಂದು ಅವರೂ ನಕಾರವೆತ್ತಲಿಲ್ಲ. ಅವನಿಗೂ ಅವಳಿಗೂ ಆಶ್ರಮದಲ್ಲಿ ಹಾರ ಬದಲಾಯಿಸಲಾಯಿತು. ಈ ರೀತಿ ಮದುವೆಯಾದ ದಂಪತಿಗಳಿಗಾಗಿ ಆಶ್ರಮದಲ್ಲಿ ಚಿಕ್ಕ ಚಿಕ್ಕ ಕುಟೀರಗಳಿದ್ದವು. ಸ್ವಾಮೀಜಿ ಇವರಿಗೂ ಒಂದು ಕುಟೀರದಲ್ಲಿ ಇರಲು ವ್ಯವಸ್ಥೆ ಮಾಡಿದರು.

ಮಧ್ಯಾಹ್ನದ ಪೂಜೆಗೆಂದು ಹೊರಟವಳು ಯಾಕೋ ತಲೆ ತಿರುಗಿದಂತಾಗಲು ಮುಂದಕ್ಕೆ ಹೋಗಲಾರದೆ ಅವಳು ಕುಟೀರಕ್ಕೆ ವಾಪಸ್ಸಾದಳು. ಕುಟೀರದ ಒಳಗೆ ಪ್ರವೇಶಿಸುತ್ತಿದ್ದಂತೆ ಅವಳು ಕಂಡ ದೃಶ್ಯ ಅದನ್ನು ವಿವರಿಸೋದು ಅಸಾಧ್ಯ. ಅದೊಂದು ಊಹಾತೀತ ಅಸಹನೀಯ ಅಸಹ್ಯ ದೃಶ್ಯ. ಆ ಹುಡುಗಿ ಕೂಡಾ ಆಶ್ರಮದ ಒಬ್ಬ ಭಕ್ತೆ. ಅವನೊಂದಿಗೆ ಆ ಹುಡುಗಿ ಅದೆಂಥಾ ಸ್ಥಿತಿಯಲ್ಲಿದ್ದಳೆಂದರೆ ಅದನ್ನು ಕಂಡ ಅವಳು ಮೂರ್ಛೆ ಹೋಗದಿರೋದು ಹೆಚ್ಚು. ಅವಳು ಈ ದೃಶ್ಯ ನೋಡಲಾರದೆ ತಿರುಗಿ ನಿಂತುಬಿಟ್ಟಳು. ಆ ಹುಡುಗಿ ಅವಸರವಸರವಾಗಿ ಸೀರೆ ಸುತ್ತಿಕೊಂಡು ಹೊರಗೋಡಿದಳು. ಇವಳು ಮಾತಾಡದೆ ತನ್ನ ಬಟ್ಟೆಬರೆಗಳನ್ನು ಬ್ಯಾಗ್ ನಲ್ಲಿ ತುಂಬಲಾರಂಭಿಸಿದಳು. ಅವನು ಹೇಳುತ್ತಲಿದ್ದ ‘’ನಾನವಳಲ್ಲಿ ರಾಧೆಯನ್ನು ಕಂಡೆ. ಇದರಲ್ಲಿ ನನ್ನ ತಪ್ಪು ಏನೂ ಇಲ್ಲ. ನೀನೂ ರಾಧೆ ಅವಳೂ ರಾಧೆ ಇಬ್ಬರಲ್ಲೂ ನಾನು ರಾಧೆಯನ್ನ ಕಂಡೆ’’. ನಾಳೆ ದಿನ ಇನ್ನೊಬ್ಬ ರಾಧೆನೂ ಕಾಣಬಹುದು ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾ ಬ್ಯಾಗ್ ಎತ್ತಿಕೊಂಡು ಅವಳು ಹೊರಟೇ ಬಿಟ್ಟಳು.

ಮನೆಗೆ ಬಂದವಳೇ ‘’ಅಮ್ಮಾ ನಾನು ತಪ್ಪು ಮಾಡಿಬಿಟ್ಟೆ. ಆವತ್ತು ನಿನ್ನ ಮಾತು ಕೇಳಿದ್ದರೆ ನನಗೆ ಈ ಸ್ಥಿತಿ ಬರುತ್ತಿರಲಿಲ್ಲ. ನನ್ನ ಕ್ಷಮಿಸಮ್ಮಾ’’ ಅನ್ನುತ್ತಾ ಅಮ್ಮನ ಕಾಲು ಹಿಡ್ಕೊಂಡು ಒಂದೇ ಸಮನೆ ಗೋಳಾಡಲಾರಂಭಿಸಿದಳು. ಸಮಾಧಾನ ಆಗುವವರೆಗೂ ಅಳಲಿ ಎಂದು ಅವಳಮ್ಮ ಸುಮ್ಮನಿದ್ದುಬಿಟ್ಟಳು. ಕೃಷ್ಣ ಕೃಷ್ಣ. ಏನು ನಿನ್ನ ಲೀಲೆ. ಅಂದು ಸ್ವಾಮೀಜಿ ಹೇಳಿದ ‘’ಅವನಿಚ್ಛೆ ಇದ್ದಲ್ಲಿ ಸ್ವಲ್ಪ ಸಮಯದ ನಂತರ ಅವಳೇ ಬರುತ್ತಾಳೆ’’ ಅನ್ನುವ ಮಾತನ್ನು ಅವಳಮ್ಮ ನೆನಪಿಸಿಕೊಂಡಳು. ಮುಂದಿನ ಮಗಳ ಜೀವನದ ಬಗ್ಗೆ ಯೋಚಿಸಲಾರಂಭಿಸಿದಳು.
*****

Friday, 8 November 2013

ಕ್ಯಾನ್ಸರ್


ಇತ್ತೀಚೆಗೆ ಎಲ್ಲಾ ಬ್ಲೌಸುಗಳೂ ತುಂಬಾ ಬಿಗಿಯುತ್ತಿತ್ತು. ನಾನೇನೂ ದಪ್ಪ ಆಗಿರಲಿಲ್ಲ. ಮೊದಲಿದ್ದ ಹಾಗೇ ಇದ್ದೆ. ಆದರೆ ಬ್ಲೌಸ್ ಯಾಕೆ ಟೈಟ್ ಆಗುತ್ತಿದೆ ಅರ್ಥವಾಗಲಿಲ್ಲ. ಬ್ಲೌಸ್ ಕಳಚಿ ಕನ್ನಡಿ ಮುಂದೆ ನಿಂತೆ. ದಷ್ಟಪುಷ್ಟವಾದ ಸ್ತನಗಳು. ಬಲಗೈಯನ್ನು ಮೇಲಕ್ಕೆತ್ತಿ ಎಡಗೈಯಿಂದ ಬಲ ಸ್ತನವನ್ನೂ, ಎಡಗೈಯನ್ನು ಮೇಲಕ್ಕೆತ್ತಿ ಬಲಗೈಯಿಂದ ಎಡ ಸ್ತನವನ್ನೂ ಒತ್ತಿ ಒತ್ತಿ ನೋಡಲಾರಂಭಿಸಿದೆ. ಏನೂ ಗೊತ್ತಾಗಲಿಲ್ಲ.

ಒಂದು ದಿನ ಎಡಗೈ ಎತ್ತಲಾಗದಷ್ಟು ನೋವಾಗಲಾರಂಭಿಸಿತು. ಡಾಕ್ಟರಲ್ಲಿ ಹೋದಾಗ ಸ್ತನ ಕ್ಯಾನ್ಸರ್ ಇರುವುದು ಗೊತ್ತಾಯಿತು.  3-4 ಡಾಕ್ಟರನ್ನು ಕನ್ಸಲ್ಟ್ ಮಾಡಿದೆವು. ಎಲ್ಲಾ ಕಡೆ ಒಂದೇ ರಿಸಲ್ಟ್. ಕೊನೆಗೆ ಬೆಂಗಳೂರು ಅನ್ಕಾಲಜಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆದೆ. ಮುಲಾಜಿಲ್ಲದೆ ಎಡಸ್ತನವನ್ನು ಕತ್ತರಿಸಿ ಹಾಕಿದರು. ಅಂದು ನಾನು ಅನುಭವಿಸಿದ ನೋವು, ಸಂಕಟ ಯಾರಿಗೂ ಬೇಡ. ಆಮೇಲೆ ತಿಂಗಳಿಗೊಂದರಂತೆ ಒಟ್ಟು 6 ಕಿಮೋ ತೆಗೆದುಕೊಳ್ಳಬೇಕು ಅಂದ್ರು. ಅದರಂತೆ ತಿಂಗಳಿಗೊಮ್ಮೆ ಕಿಮೋ ತಗೊಳ್ಳಲು ಆರಂಭಿಸಿದೆ.  3-4 ಕಿಮೋ ತಗೊಳ್ಳೊವರೆಗೂ ಸರಿಯಾಗೇ ಇದ್ದೆ. ಆಮೇಲೆ ಕಿಮೋ ತಗೊಳ್ಳಲು ಆಸ್ಪತ್ರೆಗೆ ಹೋಗ್ಬೇಕು ಅಂದ್ರೆ ಚಳಿ ಸುರುವಾಗುತ್ತಿತ್ತು. ಕಿಮೋ ತಗೊಂಡ ಒಂದು ವಾರ ತುಂಬಾ ಹಿಂಸೆ ಆಗುತ್ತಿತ್ತು. ಏನು ತಗೊಂಡರೂ ವಾಂತಿ ಆಗುತ್ತಿತ್ತು. ಒಂದು ದಿನ ತಲೆಗೆ ಸ್ನಾನ ಮಾಡಿ ಬಂದು ತಲೆ ಒರೆಸಿದ್ರೆ ಕೂದಲೆಲ್ಲಾ ಟವೆಲ್ ನಲ್ಲಿ ಬಂದಿತ್ತು. ನಾನು ಬೋಡಿ ಆಗಿದ್ದೆ. 6 ರಿಂದ 8 ಕಿಮೋ ಆಯಿತು. ಇನ್ನೂ 4 ಕಿಮೋ ತಗೋಬೇಕು ಅಂದ್ರು. ಔಷಧಿಯ ಪರಿಣಾಮ ಮೈಯೆಲ್ಲಾ ಕಪ್ಪಾಗಿತ್ತು ಜೊತೆಗೆ ಗುಳ್ಳೆಗಳು. ತಲೆ ಹುಬ್ಬು ಕಣ್ಣು ರೆಪ್ಪೆ ಎಲ್ಲೂ ಕೂದಲಿನ ಸುಳಿವಿಲ್ಲ. ಕನ್ನಡಿ ಮುಂದೆ ನಿಂತುಕೊಳ್ಳಲೂ ಭಯಪಡುವಂತಾಯಿತು. ಒಂದೊಮ್ಮೆ ಕಾಲೇಜಿಗೆ ಹೋಗುತ್ತಿರಬೇಕಾದರೆ ಹುಡುಗರ ಹಿಂಡೇ ಹಿಂದಿನಿಂದ ಬರುತ್ತಿತ್ತು. ಸ್ನೇಹಿತೆಯರೆಲ್ಲ ಏನು ಸೆಕ್ಸಿ ಆಗಿದ್ದೀಯ ಕಣೆ ಅಂತ ರೇಗಿಸುತ್ತಿದ್ದರು. ನನಗಾಗ ಹೆಮ್ಮೆ ಅನಿಸುತ್ತಿತ್ತು. ಅವರುಗಳು ಒಳಗೊಳಗೆ ಕುರುಬುತ್ತಿದ್ದರು. ಅದೆಲ್ಲಾ ಒಮ್ಮೆ ಕಣ್ಣ ಮುಂದೆ ಹಾದು ಹೋಯಿತು.

ಅಪ್ಪನನ್ನು ಕಳಕೊಂಡ ಅಮ್ಮನಿಗೆ ಇಳಿವಯಸ್ಸಿನಲ್ಲಿ ನಾನು ಸೇವೆ ಮಾಡಬೇಕಾಗಿದ್ದ ಸಮಯ ಅವಳಿಂದ ಸೇವೆ ಮಾಡಿಸಿಕೊಳ್ಳಬೇಕಾಗಿ ಬಂದಿದ್ದು ನನ್ನ ದುರಾದೃಷ್ಟ. ನನ್ನನ್ನು ನೋಡಿಕೊಳ್ಳುವುದರ ಜೊತೆಗೆ ವಿಷಯ ತಿಳಿದು ನನ್ನನ್ನು ನೋಡಲೆಂದು ಊರಿನಿಂದ ಬರುತ್ತಿದ್ದ ಸಂಬಂಧಿಕರನ್ನೂ ಸುಧಾರಿಸಬೇಕಿತ್ತು. ನನಗೆ ಅಳಲು ಕಣ್ಣಲ್ಲಿ ನೀರು ಕೂಡಾ ಬತ್ತಿ ಹೋಗಿತ್ತು. ಎಲ್ಲಿತ್ತು ಈ ಹಾಳು ಕಾಯಿಲೆ. ಎಷ್ಟು ಜನರಿಗೆ ನನ್ನಿಂದ ತೊಂದರೆ. ಅದರ ಬದಲು ಹಾರ್ಟ್ ಅಟ್ಯಾಕ್ ಆದ್ರು ಆಗಬಾರದಿತ್ತಾ ಅನ್ನಿಸುತ್ತಿತ್ತು.

ಆ ಸಮಯದಲ್ಲಿ ಬಂದವಳು ರಾಜೇಶ್ವರಿ. ಸುಮಾರು 12 ವರ್ಷಗಳ ಹಿಂದೆ ಅವಳೂ ಕೂಡಾ ಇದೇ ಕಾಯಿಲೆಯಿಂದ ನರಳುತ್ತಿದ್ದವಳು. ಆದರೆ ಅವಳಿಗೆ ಸಾಂತ್ವನ ಹೇಳುವವರಾಗಲಿ ಸೇವೆ ಮಾಡುವವರಾಗಲಿ ಯಾರೂ ಇರಲಿಲ್ಲ. ಅವಳಿಗೆ ಇದ್ದುದು ಒಂದೇ ಅದು ವಿಲ್ ಪವರ್. ಕಾಯಿಲೆಯಿಂದ ಗುಣಮುಖಳಾಗುತ್ತಿದ್ದಂತೆ ಅವಳು ನಿರ್ಧರಿಸಿದ್ದಳು. ಈ ಕಾಯಿಲೆಯಿಂದ ನರಳುವ ಯಾರಿಗಾದರೂ ತನ್ನಿಂದಾದ ಸಹಾಯ ಮಾಡಬೇಕು ಎಂದು. ಯಾರಿಗಾದರೂ ಈ ಕಾಯಿಲೆ ಇರುವ ವಿಷಯ ತಿಳಿದ ತಕ್ಷಣ ಎಷ್ಟೇ ದೂರವಾದ್ರೂ ಸರಿ ಅವರಲ್ಲಿಗೆ ಹೋಗಿ ಸಾಂತ್ವನ ಹೇಳುತ್ತಿದ್ದಳು. ತನ್ನಿಂದಾದ ಸಹಾಯ ಮಾಡುತ್ತಿದ್ದಳು. ವಿಷಯ ತಿಳಿದು ನನ್ನಲ್ಲಿಗೂ ಹುಡುಕಿಕೊಂಡು ಬಂದು ತನ್ನ ಅನುಭವವನ್ನು ಹೇಳಿದಾಗ, ಎಲ್ಲಾ ಮುಗಿದು ಹೋಯಿತು ಎಂದು ಆತ್ಮವಿಶ್ವಾಸ ಕಳೆದುಕೊಂಡಂತಿದ್ದ ನನ್ನಲ್ಲೂ ಕೊಂಚ ಬದಲಾವಣೆ ಆಗಲಾರಂಭಿಸಿತು. ನನ್ನಲ್ಲಿನ ಬದಲಾವಣೆ ಕಂಡು ಅಮ್ಮನಿಗೂ ಕೊಂಚ ಹಾಯೆನಿಸಿತ್ತು.

ಇಂದು ಸಂಪೂರ್ಣವಾಗಿ ಹುಷಾರಾಗಿದ್ದೇನೆ. ಇಂದು ಕೂಡಾ ಬ್ಲೌಸ್ ಕಳಚಿ ಕನ್ನಡಿ ಮುಂದೆ ನಿಂತಿದ್ದೇನೆ. 8 ವರ್ಷದ ಮಗಳು ನೋಡಿದವಳೇ ಬೆಚ್ಚಿ ಯಾಕಮ್ಮಾ ಹೀಗಿದೆ ನಿನ್ನ ಮೊಮ್ಮ ಏನಾಯ್ತಮ್ಮ ಎಂದು ಅಳಲಾರಂಭಿಸಿದಳು. ನಾನು ಅವಳನ್ನು ತಬ್ಬಿಕೊಂಡವಳೇ ಅಳಬೇಡ ಕಂದಾ, ಅದರ ಮೇಲೆ ಗಾಯ ಆಗಿತ್ತು ಅದಕ್ಕೆ ಅದನ್ನ ಕಟ್ ಮಾಡಿದ್ದಾರೆ. ಸ್ವಲ್ಪ ದಿನ ಆದ ಮೇಲೆ ಬರುತ್ತೆ ಅಂತ ಸಮಾಧಾನಪಡಿಸಿದೆ. ಅಂದಿನಿಂದ ನಾನು ಕೂಡಾ ರಾಜೇಶ್ವರಿಯ ಹಾದಿ ಹಿಡಿದೆ. ಯಾರಿಗಾದರೂ ಈ ಕಾಯಿಲೆ ಇರುವ ವಿಷಯ ತಿಳಿದಲ್ಲಿ ಹೋಗಿ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಹಾಗೂ ಈ ಕಾಯಿಲೆ ಬಂದ್ರೆ ಸತ್ತೇ ಹೋಗುತ್ತಾರೆ ಎಂಬ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ಪ್ರಾರಂಭಿಸಿದೆ. 40 ವರ್ಷ ಮೇಲ್ಪಟ್ಟವರು ವರ್ಷಕ್ಕೊಮ್ಮೆ ಮಮೋಗ್ರಫಿ ಮಾಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಿದೆ.  ಈಗ ನನ್ನಲ್ಲಿ ನನಗೆ ತೃಪ್ತಿ ಇದೆ. ಆತ್ಮವಿಶ್ವಾಸ ಒಂದಿದ್ದಲ್ಲಿ ಜೀವನದಲ್ಲಿ ಏನನ್ನಾದರೂ ಗೆಲ್ಲಬಹುದು. ಆದರೂ ಕನ್ನಡಿ ಮುಂದೆ ನಿಂತಾಗಲೆಲ್ಲಾ ದೇವರಲ್ಲಿ ಬೇಡಿಕೊಳ್ಳುತ್ತೇನೆ ಈ ಕಾಯಿಲೆ ಯಾರಿಗೂ ಬಾರದಿರಲಿ.

*****

Thursday, 7 November 2013

ಸಂಬಂಧ


ಅಂದು ನನ್ನ ಮಗುವಿನ ನಾಮಕರಣ. 9 ತಿಂಗಳಿಗೆ ನಾಮಕರಣ ಮಾಡಲು ನಿಶ್ಚಯಿಸಿ ನೆಂಟರಿಷ್ಟರನ್ನೆಲ್ಲಾ ಆಹ್ವಾನಿಸಿದ್ದೆವು. ಎಲ್ಲೆಲ್ಲೂ ಸಂತಸ ಸಂಭ್ರಮ ತುಳುಕಾಡುತ್ತಿತ್ತು. ಎಲ್ಲರೂ ಮಗುವನ್ನು ಹೊಗಳುವವರೇ. ಮದುವೆಯಾಗಿ 15 ವರ್ಷಗಳ ನಂತರ ಹುಟ್ಟಿದ ಗಂಡು ಮಗು. ಅಮ್ಮನಿಗಂತೂ ಸಂತೋಷದಿಂದ ಕಾಲು ನೆಲದ ಮೇಲೇ ನಿಲ್ಲುತ್ತಿರಲಿಲ್ಲ. ‘’ನನ್ನ ಮಗನೂ ಚಿಕ್ಕೋನಿರೋವಾಗ ಹೀಗೇ ಇದ್ದ. ಕಣ್ಣು ಮೂಗು ಎಲ್ಲಾ ನನ್ನ ಮಗನ ತರಾನೇ ಇದೆ’’ ಎಂದು ಎಲ್ಲರಿಗೂ ಮಗುವನ್ನು ತೋರಿಸಿದ್ದೇ ತೋರಿಸಿದ್ದು. ಅವರ ಸ್ನೇಹಿತೆಯರು ಕೂಡಾ ‘’ಹೌದು ಕಣ್ರೀ ಡಿಟ್ಟೋ ನಿಮ್ಮ ಮಗನ ತರಾನೇ ಇದ್ದಾನೆ’’ ಅಂತಿದ್ರು.

 ಮದುವೆಯಾಗಿ ಎಂಟು ವರ್ಷಗಳಾದರೂ ಇನ್ನೂ ಮಕ್ಕಳಾಗದಿದ್ದ ನಮ್ಮನ್ನು ಕೆಲವರು ಹಿಂದಿನಿಂದ ಆಡಿಕೊಳ್ಳುತ್ತಿದ್ದರು. ಬೇಡಾ ಅಂದ್ರೂ ಅದು ನಮ್ಮ ಕಿವಿಗೆ ಬೀಳುತ್ತಿತ್ತು. ಹೋಮಿಯೋಪತಿಗೆ ಹೋದಲ್ಲಿ ಮಕ್ಕಳಾಗುವ ಸಾಧ್ಯತೆ ಇದೆ ಎಂದು ಒಬ್ಬರು ಹೇಳಿದರು. ಅದನ್ನು ಪ್ರಯತ್ನಿಸಿದೆವು. ನಾಗದೋಷವಿದ್ದಲ್ಲಿ ನಾಗ ಪ್ರತಿಷ್ಟೆ ಮಾಡಿಸಿದರೆ ಮಕ್ಕಳಾಗುತ್ತದೆ ಎಂದು ಇನ್ನೊಬ್ಬರು ಹೇಳಿದರು. ಅದನ್ನೂ ಮಾಡಿದೆವು. ಕೊನೆಗೆ ಯಾರು ಏನು ಹೇಳುತ್ತಾರೆ ಎಲ್ಲವನ್ನೂ ಮಾಡಿದೆವು. ಕೊನೆಗೆ ಒಬ್ಬ ಫೇಮಸ್ ಡಾಕ್ಟರಲ್ಲಿ ಇಬ್ಬರೂ ಮೆಡಿಕಲ್ ಚೆಕ್ ಅಪ್ ಮಾಡಿಸಿದಾಗ ನನ್ನಲ್ಲೇ ದೋಷವಿರುವ ಕಾರಣ ಮಕ್ಕಳಾಗುವ ಸಾಧ್ಯತೆ ತುಂಬಾ ಕಡಿಮೆ ಎಂದು ತಿಳಿಯಿತು. ಇಬ್ಬರೂ ದಿಕ್ಕು ತೋಚದೆ ಪೆಚ್ಚಾಗಿ ಮನೆಗೆ ಹಿಂತಿರುಗಿದೆವು. ಅಮ್ಮ ನೊಂದುಕೊಳ್ಳುತ್ತಾರೆ ಅಂತ ವಿಷಯ ಮುಚ್ಚಿಟ್ಟೆವು. ಆಮೇಲೆ ನಾವಿಬ್ಬರು ಅನುಭವಿಸಿದ ನೋವು ಹೇಳಲಸಾಧ್ಯ.

ಅಂದು ನನ್ನವಳ ವರ್ತನೆ ಸ್ವಲ್ಪ ವಿಚಿತ್ರವಾಗಿತ್ತು. ನನ್ನನ್ನು ತಬ್ಬಿಕೊಂಡವಳೇ ಗೊಳೋ ಎಂದು ಅಳಲು ಶುರು ಮಾಡಿದಳು. ‘’ನನ್ನಿಂದ ಒಂದು ತಪ್ಪಾಗಿದೆ. ಕ್ಷಮಿಸಲಾರದ ತಪ್ಪು ಅದು. ಆದ್ರೂ ಕ್ಷಮಿಸಿ ಅಂತ ನಾಚಿಕೆ ಬಿಟ್ಟು ಕೇಳುತ್ತಿದ್ದೀನಿ. ಕ್ಷಮಿಸ್ತೀರಿ ಅಲ್ವಾ’’ ಅಂತ ಅಳುತ್ತಲೇ ಕೇಳಿದ್ಲು. ‘’ಮೊದಲು ಕಣ್ಣೊರಸಿಕೊಂಡು ಏನಾಯ್ತು ಅಂತ ಹೇಳು’’ ಅಂದೆ.

ಕೆಎಎಸ್ ಆಫೀಸರ್ ಆಗಿದ್ದ ನನಗೆ ಓಡಾಡಲು ಸರ್ಕಾರದಿಂದ ಅಂಬಾಸಿಡರ್ ಕಾರ್ ಕೊಟ್ಟಿದ್ದರು. ಕುಮಾರ್ ಅಂತ ಕಾರಿನ ಡ್ರೈವರ್. ತುಂಬಾ ಒಳ್ಳೆಯ ಹುಡುಗ.  ಒತ್ತಾಯ ಮಾಡಿ ಕರೆದ್ರೆ ಮಾತ್ರ ಮನೆ ಒಳಗೆ ಬರುತ್ತಿದ್ದ. ನನ್ನವಳು ಶಾಪಿಂಗ್ ಹೋಗಬೇಕಾದ್ರೆ ಕುಮಾರ್ ಗೆ ಹೇಳಿ ಕಳುಹಿಸುತ್ತಿದ್ದಳು. ಅಂದು ನನ್ನವಳು ಶಾಪಿಂಗ್ ಮುಗಿಸಿಕೊಂಡು ಬಂದವಳು ಕುಮಾರ್ ಗೆ ಶಾಪಿಂಗ್ ಮಾಡಿದ ಸಾಮಾನನ್ನು ಸ್ವಲ್ಪ ಒಳಗೆ ತಂದು ಕೊಡುತ್ತೀಯಾಪ್ಪಾ ಅಂತ ಕೇಳಿದಳು. ಅವನು ಒಂದೊಂದೇ ಸಾಮಾನನ್ನು ಮನೆ ಒಳಗೆ ತಂದು ಇಡುತ್ತಿದ್ದ. ಮನೆಯಲ್ಲಿ ಇಬ್ಬರನ್ನು ಬಿಟ್ಟರೆ ಯಾರೂ ಇಲ್ಲ. ಅವಳಿಗೆ ಏನನಿಸಿತೋ ಏನೋ ಇದ್ದಕ್ಕಿದ್ದಂತೆ ಅವನ ಕೈ ಹಿಡಕೊಂಡವಳೇ ನನಗೆ ಒಂದು ಸಹಾಯ ಮಾಡುತ್ತೀಯಾಪ್ಪಾ ಅಂತ ಕೇಳಿದಳು. ಜಾಸ್ತಿ ಮಾತಾಡದಿದ್ದ ಅವನು ಕಣ್ಣು ಪಿಳಿಪಿಳಿ ಬಿಡಲಾರಂಭಿಸಿದ. ಅವಳು ಇನ್ನೂ ಹತ್ತಿರ ಬಂದು, ‘’ನಿನಗೆ ಗೊತ್ತೇ ಇದೆ ನನಗೆ ಮಕ್ಕಳಿಲ್ಲ ಎಂದು. ಬಂಜೆ ಅನ್ನಿಸಿಕೊಂಡು ಸಾಕಾಗಿದೆ. ನನ್ನಲ್ಲಿ ಮಕ್ಕಾಳಾಗೋ ಎಲ್ಲಾ ಸಾಧ್ಯತೆ ಇದೆ. ನನಗೆ ತಾಯಿ ಆಗೋ ಭಾಗ್ಯ ಕರುಣಿಸುತ್ತೀಯಾಪ್ಪಾ. ನಿನ್ನ ಕೈ ಮುಗಿದು ಬೇಡಿಕೊಳ್ಳುತ್ತೇನೆ. ಮತ್ತೆ ಯಾವತ್ತೂ ನಿನ್ನನ್ನು ಕಣ್ಣೆತ್ತಿ ಸಹಾ ನೋಡುವುದಿಲ್ಲ. ನೋಡು ನಿನಗೆ ಒಪ್ಪಿಗೆ ಇದ್ದಲ್ಲಿ ನಾಳೆ ಇದೇ ಸಮಯಕ್ಕೆ ನೀನು ಇಲ್ಲಿ ಇರ್ತಿಯ. ಕಾಯುತ್ತಿರುತ್ತೇನೆ’’ ಅಂದಳು. ಮರುದಿನ ಎಣ್ಣೆ ನೀರು ಸ್ನಾನ ಮಾಡಿ ಅವಳು ಅವನಿಗೋಸ್ಕರ ಕಾಯುತ್ತಿದ್ದಳು. ಅವನು ಸಂಕೋಚದಿಂದ ಹೆದರುತ್ತಲೇ ಮನೆಯೊಳಗೆ ಕಾಲಿರಿಸಿದ. ಹುಚ್ಚು ಸಂತೋಷ ಜೊತೆಗೆ ಭಯ ಅವಳಲ್ಲಿ ಕಾಣುತ್ತಿತ್ತು. ಅವರಿಬ್ಬರಲ್ಲಿ ಅದು ನಡೆದು ಹೋಗಿತ್ತು. ಅವಳು ಅಂದುಕೊಂಡಂತೆ ಮುಂದಿನ ತಿಂಗಳು ಅವಳು ಮುಟ್ಟಾಗಲಿಲ್ಲ. ಅಬ್ಬಾ ಕೊನೆಗೂ ನಾನು ತಾಯಿಯಾಗುತ್ತಿದ್ದೇನೆ ಎಂದು ಎದೆ ಸಂತೋಷದಿಂದ ಬೀಗುತ್ತಿತ್ತು. ಜೊತೆಯಲ್ಲಿ ಈ ವಿಷಯ ಹೇಗೆ ಹೇಳಲಿ ಅನ್ನುವ ಭಯ ಕೂಡಾ ಕಾಡುತ್ತಿತ್ತು.

ಅಂದು ಈ ವಿಷಯವನ್ನು ಚಾಚೂ ತಪ್ಪದೆ ನನ್ನಲ್ಲಿ ಬಿಚ್ಚಿಟ್ಟಿದ್ದಳು. ತಲೆ ಬಿಸಿ ಆಗಿ ಒಂದು ಕ್ಷಣ ಏನೂ ಮಾಡಲು ತೋಚಲಿಲ್ಲ. ಕಣ್ಣು ಮುಚ್ಚಿಕೊಂಡು ನಿದ್ದೆ ಬಂದವನಂತೆ ಮಲಗಿ ಯೋಚಿಸತೊಡಗಿದೆ. ಇದರಲ್ಲಿ ಅವಳ ತಪ್ಪು ಏನೂ ಇಲ್ಲ. ಬೇರೆ ಹೆಣ್ಣಾಗಿದ್ರೆ ಬಹುಷ: ನನ್ನಲ್ಲಿಯೇ ದೋಷವಿರುವುದನ್ನು ತಿಳಿದು ರಂಪ ಮಾಡಿ ಎಲ್ಲರಿಗೂ ವಿಷಯ ಗೊತ್ತಾಗುವಂತೆ ಮಾಡಿ ನನ್ನ ಹಾಗೂ ನನ್ನ ಮನೆಯ ಮರ್ಯಾದೆ ತೆಗೆಯುತ್ತಿದ್ದಳು ಅಥವಾ ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಳ್ಳಬಹುದಿತ್ತು. ಇವಳು ಹಾಗೆ ಮಾಡಲಿಲ್ಲ ಎಲ್ಲಾ ವಿಷಯವನ್ನು ಚಾಚೂ ತಪ್ಪದೆ ನನಗೆ ಒಪ್ಪಿಸಿದ್ದಾಳೆ. ಅನಾಥ ಮಗುವನ್ನು ದತ್ತು ತೆಗೆದುಕೊಳ್ಳುವ ಬದಲು ಇದು ಬೆಟರ್ ಅಲ್ವಾ  ನಾನು ಅತಿಯಾಗಿ ಪ್ರೀತಿಸುವ ನನ್ನವಳ ರಕ್ತವನ್ನಾದರೂ ಹಂಚಿಕೊಳ್ಳುತ್ತಲ್ಲಾ ಆ ಮಗು. ಪುರಾಣ ಕಾಲದಲ್ಲೂ ಈ ರೀತಿ ನಡೆದಿತ್ತಲ್ವಾ. ಧೃತರಾಷ್ಟ್ರ, ಪಾಂಡು, ವಿಧುರ ಹಾಗೂ ಪಾಂಡವರ ಜನನ ಕೂಡಾ ಇದೇ ರೀತಿ ಅಲ್ವಾ ಆಗಿದ್ದು.

ಕುಮಾರ್ ನನ್ನು ನೋಡಿದಾಗಲೆಲ್ಲಾ ಒಂಥರಾ ಹಿಂಸೆ ಆಗುತ್ತಿತ್ತು. ಅವನನ್ನು ಬೇರೆ ಊರಿಗೆ ವರ್ಗಾಯಿಸಿ ಆ ಜಾಗಕ್ಕೆ ಬೇರೊಬ್ಬ ಡ್ರೈವರ್ ನನ್ನು ಬದಲಾಯಿಸಿದೆ. ಸ್ವಲ್ಪ ದಿನ ಅವಳ ಕಣ್ಣು ತಪ್ಪಿಸಿ ಓಡಾಡಿದೆ. ಅದನ್ನು ಅವಳಿಂದ ಸಹಿಸಲಾಗುತ್ತಿರಲಿಲ್ಲ. ತುಂಬಾ ಕಷ್ಟ ಪಡುತ್ತಿದ್ದಳು. ಬಸುರಿ ಹುಡುಗಿ ನಾನು ಹೀಗೆ ಮಾಡೋದು ಸರೀನಾ. ನಾನೂ ದೂರ ಮಾಡಿದ್ರೆ ಅವಳಿಗೆ ಯಾರಿದ್ದಾರೆ. ಮನಸ್ಸು ತಿಳಿಯಾಗಿ ಮನೆಗೆ ಬಂದವನೇ ಅವಳನ್ನು ಅಪ್ಪಿಕೊಂಡು ಸಮಾಧಾನಪಡಿಸಿದೆ. ಡಾಕ್ಟರಲ್ಲಿ ಕರೆದುಕೊಂಡು ಹೋದೆ. ನಾನು, ಅವಳು ಹಾಗೂ ಅವನು ಮೂವರು ಬಿಟ್ಟರೆ ಬೇರಾರಿಗೂ ಸತ್ಯ ಗೊತ್ತಾಗಲಿಲ್ಲ. ಗೊತ್ತಾಗೋದೂ ಇಲ್ಲ. ಗೊತ್ತಾಗೋದೂ ಬೇಡ. ಇಂದು ನಾನು, ನನ್ನ ಹೆಂಡತಿ ಹಾಗೂ ನನ್ನ ಮಗ ನಮ್ಮ ಚಿಕ್ಕ ಸಂಸಾರ ತುಂಬಾ ಚೆನ್ನಾಗಿದೆ. ಯಾರ ದೃಷ್ಟಿಯೂ ತಾಗದೆ ಇರಲಿ.

*****

 

Friday, 14 June 2013

ಬಿಳಿಗಂಡ


ಅಂದು ಮೀನಾಕುಮಾರಿ ಯವರ ಮನೆಯಲ್ಲಿ ಸಂತಸ ಸಂಭ್ರಮ ತುಂಬಿ ತುಳುಕಾಡುತ್ತಿತ್ತು. ಮನೆ ತುಂಬಾ ನೆಂಟರು. ಮುಂದಿನ ವಾರದಲ್ಲಿ ಅವರ ತಮ್ಮನ ಮಗನ ಮದುವೆ. ಮದುವೆಗೆಂದು ಅಮೇರಿಕಾದಿಂದ ಅವರ ಮನೆಗೆ ಮಗಳು, ಅಳಿಯ ಹಾಗೂ ಮೊಮ್ಮಗ ಬರುವವರಿದ್ದರು. ಎಲ್ಲರಿಗೂ ಕುತೂಹಲ ಹೊಸ ಅಳಿಯನನ್ನು ನೋಡಲು. ಎಲ್ಲರ ಮನೆಗೆ ಮಗಳು ಅಳಿಯ ಬರುತ್ತಾರಪ್ಪ. ಇದರಲ್ಲಿ ಏನು ವಿಶೇಷ ಅಂದ್ಕೋಬೇಡಿ. ವಿಶೇಷ ಇದೆ. ಎಲ್ಲರಂತಲ್ಲ ಅವರ ಅಳಿಯ. ಅವನು ಬಿಳಿ ಅಳಿಯ.

ಒಬ್ಬಳೇ ಮಗಳು. ಬೇಕಾದಷ್ಟು ಆಸ್ತಿ ಇತ್ತು. ಅಮೇರಿಕಾದಲ್ಲಿರುವ ಹುಡುಗನನ್ನು ನೋಡಿ ಬಹಳ ವಿಜ್ರಂಭಣೆಯಿಂದ ಮಗಳಿಗೆ ಮದುವೆ ಮಾಡಿ ಕೊಟ್ಟಿದ್ದರು. ಮಗಳು ಬಿಇ ಓದಿದ್ದಳು. ಅವಳೂ ಕೂಡಾ ಮದುವೆ ನಂತರ ಅಮೇರಿಕಾದಲ್ಲಿ ಕೆಲಸಕ್ಕೆ ಸೇರಿದ್ದಳು. ಆದರೆ ಅವರ ದಾಂಪತ್ಯ ಜೀವನ ಬಹಳ ದಿನ ಉಳಿಯಲಿಲ್ಲ. ಅವಳಿಗೆ ದಾಂಪತ್ಯ ಜೀವನದ ಸುಖವನ್ನು ನೀಡಲು ಅವನು ಸಂಪೂರ್ಣ ವಿಫಲನಾಗಿದ್ದ. ಅವನು ನಪುಂಸಕನಾಗಿದ್ದ. ದಿನಗಳೆದಂತೆ ಅವಳಿಗೆ ಅವನ ಜೊತೆಗಿನ ಜೀವನ ಅಸಹನೀಯವಾಗತೊಡಗಿತ್ತು. ಅವನ ಗುಟ್ಟು ಅವಳಿಗೆ ಗೊತ್ತಾಗುತ್ತಿದ್ದಂತೆ ಅವನು ಕ್ರೂರಿಯಾಗತೊಡಗಿದ್ದ. ಯವಾಗಲೂ ಅವಳ ಮೇಲೆ ಸಂಶಯಪಟ್ಟು ಹಿಂಸಿಸತೊಡಗಿದ. ಹೇಗಪ್ಪಾ ಇಲ್ಲಿಂದ ತಪ್ಪಿಸಿಕೊಂಡು ಹೋಗೋದು ಅಂತ ಅವಳು ಚಡಪಡಿಸುತ್ತಿದ್ದಳು.

       ಅಮೇರಿಕಾದ ಪ್ರತಿಷ್ಟಿತ ಕಂಪೆನಿಯಲ್ಲಿ ಅವಳು ಕೆಲಸ ಮಾಡುತ್ತಿದ್ದಳು. ಅವಳ ಬಾಸ್ ಅಮೇರಿಕಾದವನಾಗಿದ್ದ. ಅವನಿಗೆ ಮೊದಲಿನಿಂದಲೂ ಭಾರತ ದೇಶ, ಹಿಂದೂ ಧರ್ಮ, ದೇಶದ ಸಂಸ್ಕೃತಿ ಸಂಪ್ರದಾಯಗಳು, ಭಗವದ್ಗೀತೆ, ವಿವೇಕಾನಂದ ಹೀಗೆ ಎಲ್ಲದರಲ್ಲೂ ಆಸಕ್ತಿ.  ಎಲ್ಲವನ್ನೂ ಇಂಟರ್ ನೆಟ್ ನಲ್ಲಿ ಓದಿ ತಿಳಿದುಕೊಂಡಿದ್ದ. ಜೀವನದಲ್ಲಿ ಒಮ್ಮೆಯಾದರೂ ಭಾರತದೇಶಕ್ಕೆ ಭೇಟಿ ನೀಡಿ ರಾಮ, ಕೃಷ್ಣರ ಜನ್ಮಸ್ಥಳವನ್ನು ನೋಡಿ ಬರಬೇಕು ಅಂದುಕೊಳ್ಳುತ್ತಿದ್ದ. ಹೀಗಾಗಿ ಇವಳೊಂದಿಗೆ ಸಲುಗೆ ವಹಿಸಿ ಎಲ್ಲ ವಿಷಯವನ್ನು ಚರ್ಚಿಸುತ್ತಿದ್ದ. ಒಂದು ದಿನ ತುಂಬಾ ಖಿನ್ನಳಾಗಿದ್ದ ಅವಳು ತನ್ನ ವೈಯಕ್ತಿಕ ಬದುಕಿನ ಬಗ್ಗೆ ಎಲ್ಲವನ್ನೂ ಅವನೊಂದಿಗೆ ತೋಡಿಕೊಂಡಳು.

ಅವನು ಯೋಚಿಸಿದ. ತನಗಿನ್ನೂ ಮದುವೆಯಾಗಿಲ್ಲ. ಅವಳೀಗ ಅಮೇರಿಕಾದ ಪ್ರಜೆ. ಅವಳಿಗೆ ಅವಳ ಗಂಡನಿಂದ ಡೈವೋರ್ಸ್ ಪಡೆದುಕೊಳ್ಳುವುದು ಅಷ್ಟೇನೂ ಕಷ್ಟವಾಗಲಾರದು. ತಾನು ಅವಳನ್ನು ಮದುವೆಯಾಗಲು ಪ್ರಪೋಸ್ ಮಾಡಿದರೆ ಅವಳು ಒಪ್ಪಬಹುದೇ ಎಂದು ಯೋಚಿಸತೊಡಗಿದ. ಮಾರನೆ ದಿನ ಈ ವಿಷಯವನ್ನು ಅವಳಲ್ಲಿ ಬಹಿರಂಗಪಡಿಸಿದ. ಮೊದಲು ಅವಳಿಗೆ ಈ ಶಾಕ್ ನಿಂದ ಹೊರಬರಲು ಸ್ವಲ್ಪ ಸಮಯ ಹಿಡಿಸಿತು. ಆಮೇಲೆ ಅವಳೂ ಯೋಚಿಸತೊಡಗಿದಳು. ತನಗೂ ಆಸೆ ಆಕಾಂಕ್ಷೆಗಳಿವೆ. ಷಂಡ ಗಂಡನೊಂದಿಗೆ ಸಂಸಾರ ಮಾಡುವುದಂತೂ ಸಾಧ್ಯವಿಲ್ಲ. ಇವನಿಂದ ಬಿಡುಗಡೆಗೆ ದೇವರು ದಾರಿ ತೋರಿಸಿ ಕೊಟ್ಟಿದ್ದಾನೆ ಈ ಅವಕಾಶಾನಾ ಬಿಡಬಾರದು ಎಂದು ಯೋಚಿಸಿ ಮೊದಲು ಭಾರತದಲ್ಲಿರುವ ಅಪ್ಪ ಅಮ್ಮನಿಗೆ ತಿಳಿಸಿ ಅವರ ಅಭಿಪ್ರಾಯ ಪಡೆಯಬೇಕು ಎಂದು ಯೋಚಿಸಿದವಳೇ ಅಮ್ಮನಿಗೆ ಫೋನ್ ಮಾಡಿದಳು. ಅಮ್ಮನೂ ವಿಷಯ ತಿಳಿದು ಶಾಕ್ ನಿಂದ ಈಚೆ ಬರಲಾರದಾದಳು. ಬಿಳಿ ಹೆಂಡತಿಯನ್ನು ಕಟ್ಟಿಕೊಳ್ಳೋದು ಕೇಳಿದ್ದೀನಿ ಆದ್ರೆ ಮಗಳು ಬಿಳಿ ಗಂಡನನ್ನು ಕಟ್ಟಿಕೊಳ್ಳುತ್ತೇನೆ ಅಂತ ಹೇಳುತ್ತಿದ್ದಾಳಲ್ಲ. ಕೊನೆಗೆ ಅಪ್ಪ ಸಮಜಾಯಿಷಿ ನೀಡಿ ಅಮ್ಮನಿಗೆ ಸಮಾಧಾನ ಮಾಡಿ ಮದುವೆಗೆ ಒಪ್ಪಿಗೆ ನೀಡಿದರು.

ಗಂಡನಿಂದ ಡೈವೋರ್ಸ್ ಪಡೆದ ಅವಳಿಗೆ ಅಮೇರಿಕಾ ಹುಡುಗನ ಜೊತೆ ಅವನ ಆಸೆಯಂತೆ ಹಿಂದೂ ಸಂಪ್ರದಾಯ ಪ್ರಕಾರ ಮದುವೆ ಮಾಡಿಕೊಡಲಾಯಿತು. ಅಪ್ಪ ಅಮ್ಮ ಅಮೇರಿಕಾಕ್ಕೆ ಹೋಗಿ ಧಾರೆ ಎರೆದು ಕೊಟ್ಟರು. ಅಮೇರಿಕಾ ಗಂಡನಿಂದ  ಒಂದು ಗಂಡುಮಗುವನ್ನು ಪಡೆದಳು. ಅಮೇರಿಕಾದ ಬಿಳಿ ಗಂಡನೊಂದಿಗೆ ಆ ಮಗುವನ್ನು ಕರೆದುಕೊಂಡು ಅವಳು ಮಾವನ ಮಗನ ಮದುವೆಗೆಂದು ಭಾರತಕ್ಕೆ ಅಮ್ಮನ ಮನೆಗೆ ಬರುವವಳಿದ್ದಳು. ಅದಕ್ಕೆ ಆ ಮನೆಯಲ್ಲಿ ಅಂದು ಅಷ್ಟು ಸಂತಸ, ಸಂಭ್ರಮ. ಆರತಿ ಹಿಡಿದು ಬಿಳಿ ಅಳಿಯನನ್ನು ಹಾಗೂ ಮಗುವನ್ನು ಸ್ವಾಗತಿಸಲು ಎಲ್ಲರೂ ತುದಿಗಾಲಲ್ಲಿ ಕಾಯುತ್ತಿದ್ದರು.

                                        *****

Thursday, 6 June 2013

ಕುರೂಪಿ


ಯಾಕೋ ಅವನಿಗೂ ಸೌಂದರ್ಯಕ್ಕೂ ಆಗಿಬರುತ್ತಿಲ್ಲ ಅಂತ ಕಾಣ್ಸುತ್ತೆ. ಅಮ್ಮನಿಗೆ ವನು ಮತ್ತು ಅಕ್ಕ ಇಬ್ಬರು ಮಕ್ಕಳು. ಅಕ್ಕನ ವಯಸ್ಸು 30ರ ಹತ್ತಿರ ಬರುತ್ತಿದ್ದರೂ ಮದುವೆಯಾಗುವ ಯಾವ ಸೂಚನೆಯೂ ಕಂಡು ಬರುತ್ತಿಲ್ಲ.. ಅವನಿಗೆ 28 ಇರಬಹುದು. ಒಂದು ಎದುರು ಬದುರು ಅಂದರೆ ಒಂದು ತರೋದು ಒಂದು ಕೊಡೋ ಸಂಬಂಧ ಬಂದಿತ್ತು. ಅಮ್ಮ ಹೇಳುತ್ತಿದ್ದರು ಹುಡುಗಿ ನೋಡಲು ಅಷ್ಟು ಚೆನ್ನಾಗಿಲ್ಲ ಆದರೆ ಏನು ಮಾಡೋದು ನಮ್ಮ ಹುಡುಗಿ ಆಚೆ ಹೋಗಬೇಕಾದ್ರೆ ಒಪ್ಪಲೇ ಬೇಕು ಅಂತ. ಗಂಡನನ್ನು ಕಳಕೊಂಡ ಅಮ್ಮನಿಗೆ ಒಮ್ಮೆ ಮಗಳ ಮದುವೆ ಮಾಡಿ ಮುಗಿಸಿದ್ದರೆ ಸಾಕಾಗಿತ್ತು. ಬೇರೆ ಉಪಾಯವಿಲ್ಲದೆ ಹುಡುಗಿಯ ಮುಖವನ್ನೂ ನೋಡದೆ ಅವನು ಅಕ್ಕನಿಗಾಗಿ ಮದುವೆಗೆ ಒಪ್ಪಿದ್ದ. ಹುಡುಗಿ ಮನೆಯಲ್ಲೂ ಇದೇ ಸಮಸ್ಯೆ. ಆ ಹುಡುಗ ಕೂಡಾ ತಂಗಿಗೋಸ್ಕರ 30 ಅವನ ಅಕ್ಕನನ್ನು ಮದುವೆಯಾಗಲು ಒಪ್ಪಿದ್ದ.  ಯಾವುದೇ ಸಂಬಂಧ ಬಂದರೂ ಆಗುತ್ತಿರಲಿಲ್ಲ. ಕೊನೆಗೂ ಅಕ್ಕನ ಮದುವೆ ತನ್ನಿಂದ ಆಗುವಂತೆ ಆಯಿತಲ್ಲ ಎಂದು ದೊಡ್ಡ ತ್ಯಾಗಿ ಅನ್ನುವಂತೆ ಅವನು ಬೀಗುತ್ತಿದ್ದ.

 ಮದುವೆಯ ಸಿದ್ಧತೆ ನಡೆದಿತ್ತು. ಎರಡೂ ಮನೆಯವರು ಖರ್ಚನ್ನು ಅರ್ಧ ಅರ್ಧ ಹಂಚಿಕೊಳ್ಳುವುದಾಗಿ ಮಾತಾಯಿತು. ಎರಡು ಮಂಟಪ ಹಾಕಲಾಗಿತ್ತು. ಗಂಡಿನ ಕಡೆಯವರು ಹೆಣ್ಣಿನ ಕಡೆಯವರು ಅಂತ ಏನೂ ಇರಲಿಲ್ಲ. ಎಲ್ಲರೂ ಓಡಾಡುತ್ತಿದ್ದರು. ಅಕ್ಕ ಹಿರಿಯಳಾಗಿದ್ದರಿಂದ ಅವಳ ಮದುವೆ ಮೊದಲು ಆಯಿತು. ನಂತರ ಹತ್ತು ನಿಮಿಷ ಬಿಟ್ಟು ಅವನ  ಮದುವೆ. ಅಂತರಪಟ ಸರಿಯುತ್ತಿದ್ದಂತೆ ಅವನ ಉತ್ಸಾಹವೆಲ್ಲ ಜರ್ರನೆ ಇಳಿಯಿತು. ಹುಡುಗಿ ಚೆನ್ನಾಗಿಲ್ಲ ಅಂತ ಅಮ್ಮ ಹೇಳಿದ್ದರು. ಆದ್ರೆ ಇಷ್ಟು ಕೆಟ್ಟದಾಗಿ ಅಸಹ್ಯವಾಗಿ ಇರಬಹುದು ಅಂತ ಅವನು ಊಹಿಸಿರಲಿಲ್ಲ. ಸಣಕಲು ದೇಹ, ಇದ್ದಲಿನಂತಹ ಬಣ್ಣ ಗೂನು ಬೆನ್ನು ಜೊತೆಗೆ ಹಲ್ಲುಬ್ಬು. ಯಾಂತ್ರಿಕವಾಗಿ ಮದುವೆ ಏನೋ ನಡೆಯಿತು. ಆದರೆ ನಂತರ ಏನೂ ನಡೆಯಲಿಲ್ಲ.

ಇವರ ನಡುವಿನ ಸಂಬಂಧದ ಅರಿವಾಗಿ ಒಂದು ದಿನ ಅಮ್ಮನೂ ಕೊರಗಿ ಕೊರಗಿ ಸತ್ತಳು. ಅವನು ಆಫೀಸಿನಲ್ಲಿ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಗೀತಾ ಜೊತೆ ಎಲ್ಲವನ್ನೂ ಹಂಚಿಕೊಳ್ಳುತ್ತಿದ್ದ. ಅವಳಿಗಿನ್ನೂ ಮದುವೆಯಾಗಿರಲಿಲ್ಲ. ಅವಳ ಕೊತೆಗಿನ ಸ್ನೇಹ ಪ್ರೇಮವಾಗಿ ಮಾರ್ಪಟ್ಟಿತ್ತು.  ಅವನ ವಿಷಯ ಎಲ್ಲಾ ತಿಳಿದಿದ್ದರೂ ಅವಳು ಅವನನ್ನು ಪ್ರೇಮಿಸಿದ್ದಳು. ಕೊನೆಗೆ ಒಬ್ಬರನ್ನೊಬ್ಬರು ಬಿಡಲಾರದ ಸ್ಥಿತಿ ತಲುಪಿದರು. ಸಂಜೆ ಸುತ್ತಾಡಲು ಹೋಗೋದು ಮನೆಗೆ ದಿನಾ ತಡವಾಗಿ ಹೋಗೋದು ಅಭ್ಯಾಸವಾಗಿ ಹೋಯಿತು.

 ಪಾಪ ಆ ಹುಡುಗೀದು ಏನು ತಪ್ಪು. ಅವಳೇನಾದರೂ ಬಯಸಿ ಕುರೂಪಿಯಾಗಿದ್ದಳೆ ಎಂಬ ಯೋನೆಯನ್ನೂ ಮಾಡದೆ ಡೈವೋರ್ಸ್ ಗೆ ಅಪ್ಲೈ ಮಾಡಿದ. ವಿಷಯ ತಿಳಿದ ಅವರ ಮನೆಯಲ್ಲಿ ಅವನ ಅಕ್ಕನಿಗೆ ಕಿರುಕುಳ ಕೊಡಲು ಆರಂಭಿಸಿದ್ದರು. ಕೊನೆಗೆ ಒಂದು ದಿನ ಮಗಳಿಗಿಲ್ಲದ ಬಾಳು ನಿನಗೂ ಇಲ್ಲ ಎಂದು ಬಸಿರಾಗಿದ್ದ ಅಕ್ಕನನ್ನು ತವರಿಗೆ ದಬ್ಬಿದರು. ಅವನ ಅಕ್ಕ ಗಂಡು ಮಗುವಿಗೆ ಜನ್ಮ ನೀಡಿದಳು. ಅಕ್ಕನನ್ನೂ ಅವಳ ಮಗನನ್ನೂ ನೋಡಿಕೊಳ್ಳುವ ಜವಾಬ್ದಾರಿ ಕೂಡಾ ಅವನದಾಯಿತು. ಈ ಹುಡುಗಿ ಮೊದಲೇ ತವರು ಸೇರಿದ್ದಳು.  ಅವಳಿಂದ ಡೈವೋರ್ಸ್ ಸಿಕ್ಕಿ ಗೀತಾ ಜೊತೆ ಮದವೇನೂ ಆಯಿತು. ಒಬ್ಬ ಮಗಳೂ ಹುಟ್ಟಿದಳು.

ಇದ್ದಕ್ಕಿದ್ದಂತೆ ಗೀತಾಗೆ ತೊನ್ನು ರೋಗ ಆವರಿಸಿತು. ಕೈಯಲ್ಲಿ ಕಾಲಲ್ಲಿ ಪ್ರಾರಂಭವಾದ ರೋಗ ಮುಖದವರೆಗೂ ಹರಡಿತು. ಯಾವ ಔಷಧಿಯೂ ನಾಟಲಿಲ್ಲ. ಕೈಯನ್ನು ತುಂಬುತೋಳಿನ ಬ್ಲೌಸ್ ಧರಿಸಿ ಸೆರಗು ಹೊದ್ದುಕೊಂಡು ಮುಚ್ಚಲು ಪ್ರಯತ್ತಿಸುತ್ತಿದ್ದಳು. ಆದರೆ ಮುಖದ ತುಂಬಾ ಹರಡಿದ್ದ ತೊನ್ನು ರೋಗವನ್ನು ಯಾವುದರಿಂದ ಮರೆಮಾಚಲು ಸಾಧ್ಯ? ನಾಳೆ ಮಗಳನ್ನು ಯಾರು ಮದುವೆಯಾಗುತ್ತಾರೆ ಎಂದು ಅವಳು ಕೊರಗಲು ಪ್ರಾರಂಭಿಸಿದಳು. ಸಣಕಲು ಕಡ್ಡಿ, ಮುಖದ ತುಂಬಾ ಬಿಳಿ ಕಲೆ. ಅವನಿಗೆ ಅವಳ ಮೇಲೆ ಅಸಹ್ಯ ಮೂಡಲು ಪ್ರಾರಂಭವಾಯಿತು. ಏನು ಮಾಡಲಿ ಇವಳಿಗೂ ಡೈವೋರ್ಸ್ ಕೊಡಲಾ. ಅವಳಿಗೆ ಕಪ್ಪೆಂದು ಡೈವೋರ್ಸ್ ಕೊಟ್ಟಿದ್ದಾಯಿತು. ಇವಳಿಗೆ ಬಿಳಿ ಜಾಸ್ತಿ ಆಯಿತು ಅಂತ ಡೈವೋರ್ಸ್ ಕೊಡಲಾ. ಮಗಳು ಕಣ್ಮುಂದೆ ಬಂದಳು. ಮಗಳನ್ನು ತುಂಬಾ ಪ್ರೀತಿಸುತ್ತಿದ್ದ ಅವನು ಡೈವೋರ್ಸ್ ಯೋಚನೆಯನ್ನು ಕೈಬಿಟ್ಟ.

ಕಾಯಾ ವಾಚಾ ಮನಸಾ ಸಪ್ತಪದಿ ತುಳಿದು ಒಂದು ದಿನವೂ ಅವಳ ಜೊತೆ ಸಂಸಾರ ಮಾಡಲಿಲ್ಲ. ಅವಳ ಜೀವನವನ್ನೇ ನಾಶ ಮಾಡಿದ ತನಗೆ ದೇವರು ತಕ್ಕ ಶಿಕ್ಷೆಯನ್ನೇ ಕೊಟ್ಟಿದ್ದಾನೆ. ಅನುಭವಿಸಲೇಬೇಕು. ಕೊನೇ ಪಕ್ಷ ತನ್ನಿಂದ ಹಾಳಾದ ಅವಳ ಜೀವನವನ್ನು ಕಿಂಚಿತ್ತಾದರೂ ಸರಿಪಡಿಸುವ ಯೋಚನೆಯನ್ನಾದರೂ ಮಾಡಬೇಕಿತ್ತು. ಅದನ್ನೂ ಮಾಡಲಿಲ್ಲ ಎಂದು ಆ ಹುಡುಗಿಯನ್ನು ನೆನೆದು ನಿಟ್ಟುಸಿರು ಬಿಟ್ಟ. ಜೀವನದಲ್ಲಿ ಸೌಂದರ್ಯವೇ ಖಂಡಿತಾ ಮುಖ್ಯವಲ್ಲ ಎಂದು ಪಶ್ಚಾತಾಪ ಪಟ್ಟ. ಅವಳಿಗೆ ಡೈವೋರ್ಸ್ ಕೊಟ್ಟು ತಪ್ಪು ಮಾಡಿದೆ. ಈಗ ಇವಳನ್ನಾದರೂ ಚೆನ್ನಾಗಿ ನೋಡಿಕೊಳ್ಳಬೇಕು. ಗಂಡನಾದವನ ಆಸರೆ ಇದ್ದಲ್ಲಿ ಅವಳ ಮನೋಸ್ಥೈರ್ಯ ಹೆಚ್ಚಾಗುವುದು. ತಾನೂ ಕೂಡಾ ಅಸಡ್ಡೆ ತೋರಿಸಿದಲ್ಲಿ ಇವಳನ್ನೂ ಕಳೆದುಕೊಳ್ಳುವ ಸಾಧ್ಯತೆ ಇದೆ. ಹಾಗಾಗಬಾರದು. ಅವಳಲ್ಲಿ ಮಾಡಿದ ತಪ್ಪನ್ನು ಇವಳಲ್ಲಿ ಸರಿಪಡಿಸಿಕೊಳ್ಳಬೇಕು ಎಂಬ ಯೋಚನೆ ಬಂದಾಗ ಮನಸ್ಸು ಹಗುರವಾಯಿತು.

*****