Friday 24 August 2012

ಮಾನವೀಯತೆ


ಪ್ರತಿ ಭಾನುವಾರ ನಾವು ಯೂನಿವರ್ಸಿಟಿ ಗ್ರೌಂಡ್ ನಲ್ಲಿ ಕ್ರಿಕೆಟ್ ಆಡಲು ಹೋಗುತ್ತಿದ್ದೆವು. ನಮ್ಮದು ಕಾಲೇಜು ಹುಡುಗರ ಟೀಮು. ಅದಕ್ಕೆ ನಾನು ಮುಖಂಡ. ಇನ್ನೊಂದು ವಾರಾಂತ್ಯ ಕಳೆಯಲು ಬರುತ್ತಿದ್ದ ಸಾಫ್ಟ್ ವೇರ್ ಇಂಜಿನಿಯರುಗಳ ಟೀಮು. ಅದರ ಮುಖಂಡ ಐಬಿಎಂ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಆಜಾನುಬಾಹು. ಅವನ ಹೆಸರು ಕಾರ್ತಿಕ್. ನನಗೂ ಅವನಿಗೂ ಯಾವಾಗಲೂ ಎಣ್ಣೆ ಸೀಗೇಕಾಯಿ. ಒಮ್ಮೊಮ್ಮೆ ಕೈಕೈ ಮಿಲಾಯಿಸುವವರೆಗೂ ಕಿತ್ತಾಡುತ್ತಿದ್ದೆವು. ಅವರು ಸೀನಿಯರ್ ಎಂಬುದನ್ನೂ ಮರೆತು ಬಾಯಿಗೆ ಬಂದ ಹಾಗೆ ಬಯ್ಯುತ್ತಿದ್ದೆವು. ಒಟ್ಟಾರೆ ಅವರು ಪಾಕಿಸ್ತಾನ ನಾವು ಇಂಡಿಯಾ ಅನ್ನೋ ತರಹ ಆಡುತ್ತಿದ್ದೆವು.

       ಅಂದು ಕೂಡಾ ಕ್ರಿಕೆಟ್ ಆಡಲು ಬೆಳಿಗ್ಗೆ 6.00 ಗಂಟೆಗೇ ಟೀ ಕುಡಿದು ಮನೆ ಬಿಟ್ಟಿದ್ದೆ. ಮೊದಲ ಆಟ ನಾವು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡೆವು. ಮೊದಲ ಮ್ಯಾಚ್ ನಲ್ಲಿ ನಾವೇ ಗೆದ್ದೆವು. ಇನ್ನೊಂದು ಮ್ಯಾಚ್ ಅವರು ಆಡುತ್ತಿದ್ದರು. ನಾವು ಫೀಲ್ಡಿಂಗ್ ಮಾಡುತ್ತಿದ್ದೆವು. ನಾನು ಬೌಂಡರಿ ಲೈನ್ ನಲ್ಲಿ ನಿಂತಿದ್ದೆ. ಕಾರ್ತಿಕ್ ಆಡುತ್ತಿದ್ದ. ನಮ್ಮ ಟೀಮಿನ ಎಲ್ಲರೂ ಕ್ಯಾಚ್ ಎಂದು ಕಿರುಚುತ್ತಾ ಗುಂಪುಗೂಡಿದರು. ನನಗೆ ಏನಾಗುತ್ತಿದೆ ಎಂದು ಗೊತ್ತಾಗಲಿಲ್ಲ. ಕಣ್ಣು ಮಂಜುಮಂಜಾಗುತ್ತಿತ್ತು. ಏನೂ ಕಾಣಿಸುತ್ತಿರಲಿಲ್ಲ. ನಾನು ಕಣ್ಣು ಕತ್ತಲಿಟ್ಟು ಬಿದ್ದುಬಿಟ್ಟಿದ್ದೆ. ಕಾರ್ತಿಕ್  ಔಟ್ ಆದ ಖುಷಿಯಲ್ಲಿ ನನ್ನನ್ನು ಯಾರೂ ಗಮನಿಸಲಿಲ್ಲ.

ಕಾರ್ತಿಕ್ ಓಡಿ ಬಂದವನೇ ನನ್ನನ್ನು ಎತ್ತಿ ತನ್ನ ತೊಡೆ ಮೇಲೆ ಮಲಗಿಸಿ ಮುಖಕ್ಕೆ ನೀರು ಹಾಕಿ ಗಾಳಿ ಬೀಸಿದ. ತನ್ನ ಕರ್ಚೀಪ್ ನಿಂದ ತರುಚಿದ ಗಾಯದಿಂದ ಒಸರುತ್ತಿದ್ದ ರಕ್ತವನ್ನು ಒರೆಸಿದ. ನಾನು ಕಣ್ಣು ಬಿಡುತ್ತಿದ್ದಂತೆ ನಾನು ಕಾರ್ತಿಕ್ ನ ತೊಡೆ ಮೇಲೆ ಮಲಗಿದ್ದೆ. ಎಲ್ಲಾ ವಿಷಯ ನಿಧಾನವಾಗಿ ತಿಳಿಯಿತು. ಎಲ್ಲರಿಗೂ ಮಂಕು ಕವಿದಂತಾಗಿ ಆಟವನ್ನು ನಿಲ್ಲಿಸಿ ಎಲ್ಲರೂ ಹೊರಟರು. ಕಾರ್ತಿಕ್ ಏನೂ ಆಗಿಲ್ಲ. ರೆಸ್ಟ್ ತಗೊ ಎಂದು ಹೇಳಿ ನನ್ನ ಬೆನ್ನು ನೇವರಿಸಿದ. ಸ್ನೇಹಿತ ಗಾಡಿಯಲ್ಲಿ ಮನೆವರೆಗೂ ಬಿಟ್ಟು ಹೋದ. ನಾನು ಮನೆಗೆ ಬಂದವನೇ ಅಮ್ಮನಲ್ಲಿ ಎಲ್ಲಾ ವಿಷಯವನ್ನು ಹೇಳಿದೆ. ಯಾವ ತಾಯಿ ಹೆತ್ತ ಮಗನೋ ಅವನ ಹೊಟ್ಟೆ ತಣ್ಣಗಿರಲಿ ಎಂದು ಅಮ್ಮ ಹರಸಿದಳು. ನನ್ನನು ಡಾಕ್ಟರಲ್ಲಿ ಕರಕೊಂಡುಹೋದಳು.

*****

No comments:

Post a Comment