Thursday 6 June 2013

ಕುರೂಪಿ


ಯಾಕೋ ಅವನಿಗೂ ಸೌಂದರ್ಯಕ್ಕೂ ಆಗಿಬರುತ್ತಿಲ್ಲ ಅಂತ ಕಾಣ್ಸುತ್ತೆ. ಅಮ್ಮನಿಗೆ ವನು ಮತ್ತು ಅಕ್ಕ ಇಬ್ಬರು ಮಕ್ಕಳು. ಅಕ್ಕನ ವಯಸ್ಸು 30ರ ಹತ್ತಿರ ಬರುತ್ತಿದ್ದರೂ ಮದುವೆಯಾಗುವ ಯಾವ ಸೂಚನೆಯೂ ಕಂಡು ಬರುತ್ತಿಲ್ಲ.. ಅವನಿಗೆ 28 ಇರಬಹುದು. ಒಂದು ಎದುರು ಬದುರು ಅಂದರೆ ಒಂದು ತರೋದು ಒಂದು ಕೊಡೋ ಸಂಬಂಧ ಬಂದಿತ್ತು. ಅಮ್ಮ ಹೇಳುತ್ತಿದ್ದರು ಹುಡುಗಿ ನೋಡಲು ಅಷ್ಟು ಚೆನ್ನಾಗಿಲ್ಲ ಆದರೆ ಏನು ಮಾಡೋದು ನಮ್ಮ ಹುಡುಗಿ ಆಚೆ ಹೋಗಬೇಕಾದ್ರೆ ಒಪ್ಪಲೇ ಬೇಕು ಅಂತ. ಗಂಡನನ್ನು ಕಳಕೊಂಡ ಅಮ್ಮನಿಗೆ ಒಮ್ಮೆ ಮಗಳ ಮದುವೆ ಮಾಡಿ ಮುಗಿಸಿದ್ದರೆ ಸಾಕಾಗಿತ್ತು. ಬೇರೆ ಉಪಾಯವಿಲ್ಲದೆ ಹುಡುಗಿಯ ಮುಖವನ್ನೂ ನೋಡದೆ ಅವನು ಅಕ್ಕನಿಗಾಗಿ ಮದುವೆಗೆ ಒಪ್ಪಿದ್ದ. ಹುಡುಗಿ ಮನೆಯಲ್ಲೂ ಇದೇ ಸಮಸ್ಯೆ. ಆ ಹುಡುಗ ಕೂಡಾ ತಂಗಿಗೋಸ್ಕರ 30 ಅವನ ಅಕ್ಕನನ್ನು ಮದುವೆಯಾಗಲು ಒಪ್ಪಿದ್ದ.  ಯಾವುದೇ ಸಂಬಂಧ ಬಂದರೂ ಆಗುತ್ತಿರಲಿಲ್ಲ. ಕೊನೆಗೂ ಅಕ್ಕನ ಮದುವೆ ತನ್ನಿಂದ ಆಗುವಂತೆ ಆಯಿತಲ್ಲ ಎಂದು ದೊಡ್ಡ ತ್ಯಾಗಿ ಅನ್ನುವಂತೆ ಅವನು ಬೀಗುತ್ತಿದ್ದ.

 ಮದುವೆಯ ಸಿದ್ಧತೆ ನಡೆದಿತ್ತು. ಎರಡೂ ಮನೆಯವರು ಖರ್ಚನ್ನು ಅರ್ಧ ಅರ್ಧ ಹಂಚಿಕೊಳ್ಳುವುದಾಗಿ ಮಾತಾಯಿತು. ಎರಡು ಮಂಟಪ ಹಾಕಲಾಗಿತ್ತು. ಗಂಡಿನ ಕಡೆಯವರು ಹೆಣ್ಣಿನ ಕಡೆಯವರು ಅಂತ ಏನೂ ಇರಲಿಲ್ಲ. ಎಲ್ಲರೂ ಓಡಾಡುತ್ತಿದ್ದರು. ಅಕ್ಕ ಹಿರಿಯಳಾಗಿದ್ದರಿಂದ ಅವಳ ಮದುವೆ ಮೊದಲು ಆಯಿತು. ನಂತರ ಹತ್ತು ನಿಮಿಷ ಬಿಟ್ಟು ಅವನ  ಮದುವೆ. ಅಂತರಪಟ ಸರಿಯುತ್ತಿದ್ದಂತೆ ಅವನ ಉತ್ಸಾಹವೆಲ್ಲ ಜರ್ರನೆ ಇಳಿಯಿತು. ಹುಡುಗಿ ಚೆನ್ನಾಗಿಲ್ಲ ಅಂತ ಅಮ್ಮ ಹೇಳಿದ್ದರು. ಆದ್ರೆ ಇಷ್ಟು ಕೆಟ್ಟದಾಗಿ ಅಸಹ್ಯವಾಗಿ ಇರಬಹುದು ಅಂತ ಅವನು ಊಹಿಸಿರಲಿಲ್ಲ. ಸಣಕಲು ದೇಹ, ಇದ್ದಲಿನಂತಹ ಬಣ್ಣ ಗೂನು ಬೆನ್ನು ಜೊತೆಗೆ ಹಲ್ಲುಬ್ಬು. ಯಾಂತ್ರಿಕವಾಗಿ ಮದುವೆ ಏನೋ ನಡೆಯಿತು. ಆದರೆ ನಂತರ ಏನೂ ನಡೆಯಲಿಲ್ಲ.

ಇವರ ನಡುವಿನ ಸಂಬಂಧದ ಅರಿವಾಗಿ ಒಂದು ದಿನ ಅಮ್ಮನೂ ಕೊರಗಿ ಕೊರಗಿ ಸತ್ತಳು. ಅವನು ಆಫೀಸಿನಲ್ಲಿ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಗೀತಾ ಜೊತೆ ಎಲ್ಲವನ್ನೂ ಹಂಚಿಕೊಳ್ಳುತ್ತಿದ್ದ. ಅವಳಿಗಿನ್ನೂ ಮದುವೆಯಾಗಿರಲಿಲ್ಲ. ಅವಳ ಕೊತೆಗಿನ ಸ್ನೇಹ ಪ್ರೇಮವಾಗಿ ಮಾರ್ಪಟ್ಟಿತ್ತು.  ಅವನ ವಿಷಯ ಎಲ್ಲಾ ತಿಳಿದಿದ್ದರೂ ಅವಳು ಅವನನ್ನು ಪ್ರೇಮಿಸಿದ್ದಳು. ಕೊನೆಗೆ ಒಬ್ಬರನ್ನೊಬ್ಬರು ಬಿಡಲಾರದ ಸ್ಥಿತಿ ತಲುಪಿದರು. ಸಂಜೆ ಸುತ್ತಾಡಲು ಹೋಗೋದು ಮನೆಗೆ ದಿನಾ ತಡವಾಗಿ ಹೋಗೋದು ಅಭ್ಯಾಸವಾಗಿ ಹೋಯಿತು.

 ಪಾಪ ಆ ಹುಡುಗೀದು ಏನು ತಪ್ಪು. ಅವಳೇನಾದರೂ ಬಯಸಿ ಕುರೂಪಿಯಾಗಿದ್ದಳೆ ಎಂಬ ಯೋನೆಯನ್ನೂ ಮಾಡದೆ ಡೈವೋರ್ಸ್ ಗೆ ಅಪ್ಲೈ ಮಾಡಿದ. ವಿಷಯ ತಿಳಿದ ಅವರ ಮನೆಯಲ್ಲಿ ಅವನ ಅಕ್ಕನಿಗೆ ಕಿರುಕುಳ ಕೊಡಲು ಆರಂಭಿಸಿದ್ದರು. ಕೊನೆಗೆ ಒಂದು ದಿನ ಮಗಳಿಗಿಲ್ಲದ ಬಾಳು ನಿನಗೂ ಇಲ್ಲ ಎಂದು ಬಸಿರಾಗಿದ್ದ ಅಕ್ಕನನ್ನು ತವರಿಗೆ ದಬ್ಬಿದರು. ಅವನ ಅಕ್ಕ ಗಂಡು ಮಗುವಿಗೆ ಜನ್ಮ ನೀಡಿದಳು. ಅಕ್ಕನನ್ನೂ ಅವಳ ಮಗನನ್ನೂ ನೋಡಿಕೊಳ್ಳುವ ಜವಾಬ್ದಾರಿ ಕೂಡಾ ಅವನದಾಯಿತು. ಈ ಹುಡುಗಿ ಮೊದಲೇ ತವರು ಸೇರಿದ್ದಳು.  ಅವಳಿಂದ ಡೈವೋರ್ಸ್ ಸಿಕ್ಕಿ ಗೀತಾ ಜೊತೆ ಮದವೇನೂ ಆಯಿತು. ಒಬ್ಬ ಮಗಳೂ ಹುಟ್ಟಿದಳು.

ಇದ್ದಕ್ಕಿದ್ದಂತೆ ಗೀತಾಗೆ ತೊನ್ನು ರೋಗ ಆವರಿಸಿತು. ಕೈಯಲ್ಲಿ ಕಾಲಲ್ಲಿ ಪ್ರಾರಂಭವಾದ ರೋಗ ಮುಖದವರೆಗೂ ಹರಡಿತು. ಯಾವ ಔಷಧಿಯೂ ನಾಟಲಿಲ್ಲ. ಕೈಯನ್ನು ತುಂಬುತೋಳಿನ ಬ್ಲೌಸ್ ಧರಿಸಿ ಸೆರಗು ಹೊದ್ದುಕೊಂಡು ಮುಚ್ಚಲು ಪ್ರಯತ್ತಿಸುತ್ತಿದ್ದಳು. ಆದರೆ ಮುಖದ ತುಂಬಾ ಹರಡಿದ್ದ ತೊನ್ನು ರೋಗವನ್ನು ಯಾವುದರಿಂದ ಮರೆಮಾಚಲು ಸಾಧ್ಯ? ನಾಳೆ ಮಗಳನ್ನು ಯಾರು ಮದುವೆಯಾಗುತ್ತಾರೆ ಎಂದು ಅವಳು ಕೊರಗಲು ಪ್ರಾರಂಭಿಸಿದಳು. ಸಣಕಲು ಕಡ್ಡಿ, ಮುಖದ ತುಂಬಾ ಬಿಳಿ ಕಲೆ. ಅವನಿಗೆ ಅವಳ ಮೇಲೆ ಅಸಹ್ಯ ಮೂಡಲು ಪ್ರಾರಂಭವಾಯಿತು. ಏನು ಮಾಡಲಿ ಇವಳಿಗೂ ಡೈವೋರ್ಸ್ ಕೊಡಲಾ. ಅವಳಿಗೆ ಕಪ್ಪೆಂದು ಡೈವೋರ್ಸ್ ಕೊಟ್ಟಿದ್ದಾಯಿತು. ಇವಳಿಗೆ ಬಿಳಿ ಜಾಸ್ತಿ ಆಯಿತು ಅಂತ ಡೈವೋರ್ಸ್ ಕೊಡಲಾ. ಮಗಳು ಕಣ್ಮುಂದೆ ಬಂದಳು. ಮಗಳನ್ನು ತುಂಬಾ ಪ್ರೀತಿಸುತ್ತಿದ್ದ ಅವನು ಡೈವೋರ್ಸ್ ಯೋಚನೆಯನ್ನು ಕೈಬಿಟ್ಟ.

ಕಾಯಾ ವಾಚಾ ಮನಸಾ ಸಪ್ತಪದಿ ತುಳಿದು ಒಂದು ದಿನವೂ ಅವಳ ಜೊತೆ ಸಂಸಾರ ಮಾಡಲಿಲ್ಲ. ಅವಳ ಜೀವನವನ್ನೇ ನಾಶ ಮಾಡಿದ ತನಗೆ ದೇವರು ತಕ್ಕ ಶಿಕ್ಷೆಯನ್ನೇ ಕೊಟ್ಟಿದ್ದಾನೆ. ಅನುಭವಿಸಲೇಬೇಕು. ಕೊನೇ ಪಕ್ಷ ತನ್ನಿಂದ ಹಾಳಾದ ಅವಳ ಜೀವನವನ್ನು ಕಿಂಚಿತ್ತಾದರೂ ಸರಿಪಡಿಸುವ ಯೋಚನೆಯನ್ನಾದರೂ ಮಾಡಬೇಕಿತ್ತು. ಅದನ್ನೂ ಮಾಡಲಿಲ್ಲ ಎಂದು ಆ ಹುಡುಗಿಯನ್ನು ನೆನೆದು ನಿಟ್ಟುಸಿರು ಬಿಟ್ಟ. ಜೀವನದಲ್ಲಿ ಸೌಂದರ್ಯವೇ ಖಂಡಿತಾ ಮುಖ್ಯವಲ್ಲ ಎಂದು ಪಶ್ಚಾತಾಪ ಪಟ್ಟ. ಅವಳಿಗೆ ಡೈವೋರ್ಸ್ ಕೊಟ್ಟು ತಪ್ಪು ಮಾಡಿದೆ. ಈಗ ಇವಳನ್ನಾದರೂ ಚೆನ್ನಾಗಿ ನೋಡಿಕೊಳ್ಳಬೇಕು. ಗಂಡನಾದವನ ಆಸರೆ ಇದ್ದಲ್ಲಿ ಅವಳ ಮನೋಸ್ಥೈರ್ಯ ಹೆಚ್ಚಾಗುವುದು. ತಾನೂ ಕೂಡಾ ಅಸಡ್ಡೆ ತೋರಿಸಿದಲ್ಲಿ ಇವಳನ್ನೂ ಕಳೆದುಕೊಳ್ಳುವ ಸಾಧ್ಯತೆ ಇದೆ. ಹಾಗಾಗಬಾರದು. ಅವಳಲ್ಲಿ ಮಾಡಿದ ತಪ್ಪನ್ನು ಇವಳಲ್ಲಿ ಸರಿಪಡಿಸಿಕೊಳ್ಳಬೇಕು ಎಂಬ ಯೋಚನೆ ಬಂದಾಗ ಮನಸ್ಸು ಹಗುರವಾಯಿತು.

*****

No comments:

Post a Comment