Tuesday 17 April 2012

ಆತ್ಮ


ಜನ್ಮ ಮೃತ್ಯು ಜರಾ ವ್ಯಾಧಿ ಈ ನಾಲ್ಕರಲ್ಲಿ ಮನುಷ್ಯ ತುಂಬಾ ಭಯಪಡುವುದು ಮೃತ್ಯುವಿಗೆ. ಜನ್ಮ ಅಂದರೆ ಹುಟ್ಟು. ಹುಟ್ಟಿದ ತಕ್ಷಣ ಮಗು, ಎಲ್ಲೋ ಇದ್ದಿದ್ದು ಎಲ್ಲಿಗೋ ಬಂದಿದ್ದೀನಿ ಅಂತ ಒಮ್ಮೆ ಭಯಪಟ್ಟು ಕಿರುಚಿದರೂ ನಂತರ ಸುತ್ತ ಎಲ್ಲರೂ ಇದ್ದಾರೆ ಅಂತ ಧೈರ್ಯ ತಂದ್ಕೊಂಡು ಅಳೋದನ್ನ ನಿಲ್ಲಿಸುತ್ತೆ. ಜರಾ ಅಂದರೆ ಮುಪ್ಪು. ಇದು ಎಲ್ಲರಿಗೂ ಬರುವಂತಾದ್ದು. ಇದಕ್ಕೆ ಭಯಪಡುವ ಅವಶ್ಯಕತೆ ಇಲ್ಲ. ಕೆಲವರಿಗೆ ಬೇಗ ಬರುತ್ತೆ ಇನ್ನು ಕೆಲವರಿಗೆ ತಡವಾಗಿ ಬರುತ್ತೆ. ಅಂತೆಯೇ ವ್ಯಾಧಿ ಅಂದರೆ ರೋಗ. ಇದಕ್ಕೂ ಪರಿಹಾರವಿದೆ. ರೋಗ ಮನುಷ್ಯರಿಗೆ ಬರದೆ ಮರಕ್ಕೆ ಬರುತ್ತಾ ಅನ್ನೋ ರೂಢಿ ಮಾತಿದೆ. ಆದುದರಿಂದ ವ್ಯಾಧಿಗೂ ಭಯಪಡುವ ಅವಶ್ಯಕತೆ ಇಲ್ಲ. ಆದರೆ ಈ ಮೃತ್ಯು ಅಂದರೆ ಸಾವು ಅನ್ನೋದು ಒಂದು ನಿಗೂಢ. ಈ ಸಾವು ಹೇಳಿ ಕೇಳಿ ಬರೋದಿಲ್ಲ. ಇದು ಯಾವಾಗ ಬರುತ್ತೆ ಅಂತ ಯಾರಿಗೂ ಗೊತ್ತಿರೋದಿಲ್ಲ. ಪ್ರತಿ ಸಾವು ಕೂಡಾ ಎಚ್ಚರಿಕೆ ನೀಡುತ್ತಿರುತ್ತದೆ ಮುಂದಿನ ಸರದಿ ನಿನ್ನದು ಅಂತ. ಈ ಭಯ ವಯಸ್ಸಾದವರಲ್ಲಿ ಜಾಸ್ತಿ.  ಜನ್ಮ, ಜರಾ & ವ್ಯಾಧಿ ಈ ಮೂರರ ಬಗ್ಗೆ ನಮಗೆ ಅರಿವಿದೆ. ಆದರೆ ಈ ಸಾವಿನ ಬಗ್ಗೆ ಅರಿವಿರೋದಿಲ್ಲ. ಸತ್ತ ನಂತರ ನಾವು ಏನಾಗುತ್ತೇವೆ ಎಲ್ಲಿಗೆ ಹೋಗುತ್ತೇವೆ ಅನ್ನೋದು ಗೊತ್ತಿರೋದಿಲ್ಲ. ಹೋಗುವಾಗ ಜೊತೆಯಲ್ಲಿ ಯಾರೂ ಇರೋದಿಲ್ಲ. ಒಬ್ಬರೇ ಹೋಗಬೇಕು. ತಿರುಗಿ ಬರುವ ಹಾಗಿಲ್ಲ. ಬಂದು ನಮ್ಮವರು ಅನ್ನಿಸಿಕೊಂಡವರನ್ನು ಪುನ: ಕೂಡುವ ಹಾಗಿಲ್ಲ. ಎಲ್ಲಾ ಬಾಂಧವ್ಯಗಳನ್ನು ಕಳಚಿಕೊಂಡು ಮತ್ತೆ ಯಾವತ್ತೂ ಹಿಂದಿರುಗಿ ಬರಲಾಗದಂತ ಜಾಗಕ್ಕೆ ಹೋಗಬೇಕು. ನಾನು ಅಂದರೆ ಆತ್ಮ. ದೇಹವಲ್ಲ. ಆತ್ಮ ದೇಹವನ್ನು ಬಿಟ್ಟು ಹೋದ ನಂತರ ಆ ದೇಹವನ್ನು ಸಂಸ್ಕಾರ ಮಾಡಲಾಗುತ್ತದೆ. ಅದು ಯಾವ ಮಹಾತ್ಮನದೇ ಆಗಿರಲಿ ಅದು ಬರೀ ಶವ. ಅದು ಯಾರಿಗೂ ಯಾವುದಕ್ಕೂ ಬೇಡ. ಎಷ್ಟು ಬೇಗ ಸಂಸ್ಕಾರ ಮಾಡಿದಷ್ಟೂ ಭೂಮಿಗೆ ಭಾರ ಕಡಿಮೆ. ಸಮಯ ಕಳೆದಷ್ಟೂ ದುರ್ವಾಸನೆ ಬರಲಾರಂಭಿಸುತ್ತದೆ. ದೇಹವೇನೋ ಬೂದಿ ಆಯಿತು. ಆದರೆ, ನಾನು ಅನ್ನುವ ಈ ಆತ್ಮ ಎಲ್ಲಿಗೆ ಹೋಗುತ್ತದೆ. ನಿಜಕ್ಕೂ ಭಯಪಡುವಂತಹ ವಿಷಯವೇ.



ನಮ್ಮಲ್ಲಿ ಒಂದು ನಂಬಿಕೆ ಇದೆ. ಸತ್ತ ನಂತರದ ಮೂರು ದಿನಗಳು ಆತ್ಮ ಶವವನ್ನಿಟ್ಟ ಜಾಗದಲ್ಲಿ ಸುತ್ತುತ್ತಿರುತ್ತದೆ ಎಂದು. ಅದಕ್ಕಾಗಿ ಮೂರು ದಿನವೂ ದೀಪ ಉರಿಸಿಟ್ಟು,  ಮೊದಲ ದಿನ ಎಳನೀರು, ಎರಡನೇ ದಿನ ನೀರು ಹಾಗೂ 3ನೇ ದಿನ ಹಾಲನ್ನು ಇಟ್ಟು ಅದರೊಳಗೆ ಒಂದು ನೂಲನ್ನು ಇಳಿಬಿಡಲಾಗುತ್ತದೆ. ನೂಲಿನ ಮುಖಾಂತರ ಆತ್ಮ ಅದನ್ನು ಕುಡಿಯುತ್ತದೆ ಅನ್ನೋ ನಂಬಿಕೆ. ಅದೇ ರೀತಿ ಶವವನ್ನಿಟ್ಟ ಜಾಗದಲ್ಲಿ ಬೂದಿ ಚೆಲ್ಲಿ ಆತ್ಮದ ಹೆಜ್ಜೆ ಗುರುತನ್ನು ಅದರಲ್ಲಿ ಹುಡುಕಲಾಗುತ್ತದೆ. 11ನೇ ದಿನ ಪಿತೃಕಾರ್ಯಗಳನ್ನು ಮಾಡಿ ಅದಕ್ಕೆ ಮುಕ್ತಿ ದೊರಕಿತು ಎಂದು ಭಾವಿಸಲಾಗುತ್ತದೆ.



ಆದರೆ ಒಂದು ದೇಹದಿಂದ ಹೊರಬಂದ ಆ ಆತ್ಮ ಇನ್ನೊಂದು ದೇಹದಲ್ಲಿ ಸೇರಿಕೊಳ್ಳುತ್ತದೆ ಹಾಗೂ ಆತ್ಮವು ಹಣ್ಣುಗಳೊಳಗೆ ಸೇರಿ ಆ ಹಣ್ಣನ್ನು ತಿಂದ ಮನುಷ್ಯನ ಮೂಲಕ ಯೋನಿಯೊಳಗೆ ಸೇರಿ ಭ್ರೂಣವಾಗುತ್ತದೆ ಅನ್ನುವ ಪ್ರತೀತಿ ಇದೆ. ಎಲ್ಲವೂ ಗೋಜಲು ಗೋಜಲು. ನಿಗೂಢ. ಹುಟ್ಟು ಸಾವು ಮಾತ್ರ ನಿಜ. ಆಮೇಲಿನದು ಕಂಡವರು ಯಾರೂ ಇಲ್ಲ.

*****

No comments:

Post a Comment