ಪ್ರಪಂಚ ನೋಡೋಕೆ ನನ್ನಮ್ಮ ನನಗೆ ಅವಕಾಶಾನೇ ನೀಡಲಿಲ್ಲ. ಈ ಜಗತ್ತನ್ನು ಕಾಣೋಕೆ ಮುಂಚೇನೆ ನಾನು ಇಹಲೋಕ ತ್ಯಜಿಸಿದ್ದೆ. ಹಿಂದಿನ ಜನ್ಮದಲ್ಲಿ ನಾನೇನು ಕರ್ಮ ಮಾಡಿದ್ದೆನೋ. ಎಲ್ಲ ಅಪ್ಪ ಅಮ್ಮಂದಿರು ಮಗುವಿನ ಮುಖ ಯಾವಾಗ ನೋಡುತ್ತೇವೋ, ಅದು ಯಾವಾಗ ಕಣ್ಣು ಬಿಡುತ್ತೋ ಅಂತ ಕಾತರದಿಂದ ಕಾಯುತ್ತಿದ್ದರೆ, ನನ್ನಮ್ಮ, ಇದು ಯಾಕಾದ್ರೂ ಹುಟ್ಟುತ್ತೋ ಯಾರಿಗೆ ಬೇಕಾಗಿತ್ತು ದರಿದ್ರ ಪಿಂಡ ಅಂತ ನನ್ನನ್ನು ಹೊಟ್ಟೇಲಿದ್ದಾಗಿಂದಲೇ ಹಿಂಸಿಸುತ್ತಿದ್ದಳು. ತನ್ನ ಕ್ಷಣಿಕ ಸುಖಕ್ಕಾಗಿ ಅವಳು ನನ್ನನ್ನು ಬಲಿಕೊಟ್ಟಳು. ಹುಟ್ಟಿದ ತಕ್ಷಣವೇ ಬಟ್ಟೆಯಲ್ಲಿ ಸುತ್ತಿ ತೊಟ್ಟಿಗೆ ಎಸೀವಾಗ ಅವಳಿಗೆ ತನ್ನ ಭವಿಷ್ಯದ ಬಗ್ಗೆ ಬಿಟ್ಟು ಬೇರೇನೂ ಗೋಚರಿಸಲಿಲ್ಲ.
ಯಾಕಮ್ಮಾ ಹೀಗೆ ಮಾಡಿದೆ. ಹೀಗೆ
ಮಾಡಲು ನಿನಗೆ ಮನಸ್ಸಾದರೂ ಹೇಗೆ ಬಂತು. ನಾನು ಏನಮ್ಮ ತಪ್ಪು ಮಾಡಿದ್ದೆ. ತೊಟ್ಟೀಗೆ ಎಸೀವಾಗ
ಕರುಳ ಕುಡಿಯನ್ನು ನಾಯಿ ನರಿ ತಿನ್ನಬಹುದು ಅಂತ ನಿನಗೆ ಅನಿಸಲಿಲ್ವಾ. ಒಂಭತ್ತು ತಿಂಗಳು ನಿನ್ನ ಹೊಟ್ಟೇಲಿ
ಬೆಚ್ಚಗಿದ್ದ ನಾನು ಚಳೀಲಿ ನಡುಗಬಹುದು ಅಂತ ನಿನಗೆ ಕಿಂಚಿತ್ತೂ ಅನ್ನಿಸಲಿಲ್ವಾ. ಸಾಯೋಕೆ ಮುಂಚೆ ನಾನು
ಅದೆಷ್ಟು ಯಾತನೆ ಅನುಭವಿಸಿದೆ ಗೊತ್ತಾ. ಹಸಿವೆಯಿಂದ
ಕಂಗಾಲಾಗಿ ತೊಟ್ಟು ಹಾಲಿಗಾಗಿ ಅದೆಷ್ಟು ಕಿರುಚಿದೆ ಗೊತ್ತಾ. ಒಂದು ದೇವಸ್ಥಾನದ ಮುಂದೆ ಅಥವಾ
ಅನಾಥಾಶ್ರಮದ ಮುಂದೆಯಾದರೂ ನನ್ನನ್ನು ಎಸೀಬಾರದಿತ್ತಾ ಅಮ್ಮ. ಆಗ ನನಗೆ ಬದುಕು ನೀಡಿ ಒಳ್ಳೆಯವರು
ಇನ್ನೂ ಪ್ರಪಂಚದಲ್ಲಿ ಇದ್ದಾರೆ ಅನ್ನೋದನ್ನ ಯಾರಾದ್ರೂ ರುಜುವಾತು ಮಾಡುತ್ತಿದ್ದರು.
ನನ್ನನ್ನು ಏನು ಉದ್ದೇಶವಿಟ್ಟು
ತೊಟ್ಟೀಗೆ ಎಸೆದಿಯೋ ಆ ಉದ್ದೇಶ ಆದಷ್ಟು ಬೇಗ ಫಲಿಸಲಿ. ಆದರೆ, ಮುಂದೊಂದು ದಿನ ನೀನು ಪುನ: ಪ್ರಸವ
ವೇದನೆ ಅನುಭವಿಸುತ್ತೀಯಲ್ಲ, ಆ ಸಂದರ್ಭದಲ್ಲಿ ಒಂದು ಕ್ಷಣ ಖಂಡಿತಾ ನನ್ನನ್ನು
ನೆನಪಿಸಿಕೊಳ್ಳುವೆ… ಆಗ ನಾನು ನಿನ್ನ ಮನಸ್ಸಿನ ಒಂದು ಕಪ್ಪು ಚುಕ್ಕೆಯಾಗಿ ಪ್ರತಿ ಕ್ಷಣ
ಧುತ್ತೆಂದು ಎದುರು ಬಂದು ನಿಲ್ಲುವೆ…
ನನ್ನ ಅಮ್ಮನಂತಹ ಅಮ್ಮಂದಿರೇ,
ದಯವಿಟ್ಟು ನಮ್ಮನ್ನು ಬದುಕಲು ಬಿಡಿ. ಕಣ್ಣು ತೆರೆದು ಪ್ರಪಂಚ ನೋಡಲು ನಮಗೆ ಅವಕಾಶ ಮಾಡಿಕೊಡಿ.
ನಿಮ್ಮ ಸ್ವಾರ್ಥಕ್ಕಾಗಿ ನಮ್ಮನ್ನು ಬಲಿಕೊಡಬೇಡಿ ದಯವಿಟ್ಟು…
No comments:
Post a Comment